ADVERTISEMENT

ಖಾಸಗಿ ಟ್ಯಾಂಕರ್‌ಗಳಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:35 IST
Last Updated 15 ಏಪ್ರಿಲ್ 2012, 19:35 IST

ಬೆಂಗಳೂರು: ಬೇಸಿಗೆಯ ದುರ್ಲಾಭ ಪಡೆದು ಹೆಚ್ಚಿನ ದರ ವಿಧಿಸಿ ಜನರನ್ನು ಸುಲಿಗೆ ಮಾಡುವ ಖಾಸಗಿ ನೀರು ಸರಬರಾಜು ಟ್ಯಾಂಕರ್‌ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಚಿವ ಎಸ್. ಸುರೇಶ್‌ಕುಮಾರ್ ಭಾನುವಾರ ಇಲ್ಲಿ ಎಚ್ಚರಿಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ 2ನೇ ಬ್ಲಾಕ್‌ನಲ್ಲಿ ನಿರ್ಮಿಸಲಿರುವ ವಿವಿಧ ಸೌಲಭ್ಯವುಳ್ಳ (ಡಯಾಲಿಸಿಸ್ ಕೇಂದ್ರ ಮತ್ತು ಡಯಾಬಿಟಿಕ್ ಪ್ರಯೋಗಾಲಯ) ಅತ್ಯಾಧುನಿಕ ನೂತನ ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಜಲಮಂಡಳಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಆಯುಕ್ತರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
`ನಗರದ ನಾಗರಿಕರಿಗೆ ಜಲಮಂಡಳಿಯು ಶುದ್ಧ ಕುಡಿಯುವ ನೀರು ಪೂರೈಸುತ್ತಿದೆ. ನೀರಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.~

`ನೀರು ಕಲುಷಿತಗೊಳ್ಳದಂತೆ ಗಮನಹರಿಸಲು ವಾಲ್ವ್‌ಮೆನ್‌ಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಒಡೆದ ಪೈಪು ಅಥವಾ ಮೋರಿಯಲ್ಲಿನ ಪೈಪುಗಳಿಂದ ನೀರು ಕಲುಷಿತಗೊಳ್ಳುತ್ತಿರುವ ದೂರುಗಳ ಬಗ್ಗೆ ಪರಿವೀಕ್ಷಣೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದು ಅವರು ಹೇಳಿದರು.

`ಕಾವೇರಿ 4ನೇ ಹಂತದ 2ನೇ ಘಟ್ಟ ಬರುವ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಆನಂತರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದಂತಹ ವಾರ್ಡ್‌ಗಳಿಗೆ ಪ್ರಾಯೋಗಿಕವಾಗಿ ಕಾವೇರಿ ನೀರು ಸರಬರಾಜು ಮಾಡಲಾಗುವುದು~ ಎಂದರು.

ಇದಕ್ಕೂ ಮುನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.ಜನರಿಗೆ ಕೈಗೆಟುಕುವ ದರದಲ್ಲಿ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತದೆ. ಮುಖ್ಯವಾಗಿ ಸ್ಥಳೀಯರು ಹಾಗೂ ದುರ್ಬಲ ವರ್ಗದವರ ಅನುಕೂಲಕ್ಕಾಗಿ ಈ ಆಸ್ಪತ್ರೆ ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದರು.ಬಿಬಿಎಂಪಿ ಸದಸ್ಯರಾದ ಕೃಷ್ಣಪ್ಪ, ಪದ್ಮರಾಜ್, ರವೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.