ಬೆಂಗಳೂರು: ಕಲೆ, ಸಾಹಿತ್ಯ ಮತ್ತು ರಂಗಭೂಮಿಯನ್ನು ವಸ್ತುನಿಷ್ಠವಾಗಿ ಹಾಗೂ ಗಂಭೀರವಾಗಿ ವಿಮರ್ಶಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅಭಿಪ್ರಾಯಪಟ್ಟರು.
ದೇಸಿ ರಂಗತಂಡ, ಭೂಮಿ ಕಲಾ ಅಧ್ಯಯನ ಕೇಂದ್ರ ಹಾಗೂ ಅನ್ವೇಷಣಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ರಂಗಭೂಮಿ, ಸಾಹಿತ್ಯ ಹಾಗೂ ಕಲಾಕ್ಷೇತ್ರದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವವರು ವಿಮರ್ಶೆ ಮಾಡುವಂತಾಗಬೇಕು. ಇವುಗಳ ವಿಮರ್ಶೆಗೆ ಪಠ್ಯ ನಿರೂಪಣೆ ಮಾಡುವ ಕೆಲಸಕ್ಕೆ ನಮ್ಮ ವಿಶ್ವವಿದ್ಯಾಲಯ ವೇದಿಕೆ ಆಗಲಿದೆ’ ಎಂದರು.
ರಂಗ ವಿಮರ್ಶಕ ಡಾ.ಎ.ಆರ್.ಗೋವಿಂದಸ್ವಾಮಿ, ‘ವಿಮರ್ಶೆ ಕೇವಲ ಕೃತಿಯ ನಿಯಂತ್ರಣ ಕೆಲಸವನ್ನಷ್ಟೇ ಮಾಡದೆ, ಅದಕ್ಕೆ ಪೂರಕವಾದ ಇನ್ನೊಂದು ಪ್ರತಿಕೃತಿ ರೂಪಿಸು
ವಂತಾಗಬೇಕು. ಹೊಸ ಹೊಳಹುಗಳನ್ನು ನೀಡಬೇಕು. ಇಂತಹ ಕಲಾ ವಿಭಾಗಗಳಿಗೆ ಪ್ರತ್ಯೇಕ ವಿದ್ವಾಂಸರು, ವಿಮರ್ಶಕರು ಇಲ್ಲದ್ದು ಶೋಚನೀಯ. ವಿಮರ್ಶೆಯಿಂದಲೇ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ವಾತಾವರಣ ಸೃಷ್ಟಿಯಾಗಬೇಕು’ ಎಂದು ಹೇಳಿದರು.
ರಂಗವಿಮರ್ಶೆಯ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್, ‘ಇಂದು ಸಾಂಸ್ಕೃತಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಮಾತು ಕೇಳುವ ಸಹನೆಯನ್ನು ಯಾರೂ ತೋರುತ್ತಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.