ADVERTISEMENT

ಗಣಿ ಉದ್ಯಮ: ನಾಳೆಯಿಂದ ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಬೆಂಗಳೂರು: ಉಕ್ಕು ಮತ್ತು ಕಬ್ಬಿಣದ ಅದಿರಿನ ಕುರಿತು ಸಂಶೋಧನೆಯಲ್ಲಿ ತೊಡಗಿರುವ `ಓರ್ ಟೀಮ್~ ಕರ್ನಾಟಕದ ಗಣಿ ಉದ್ಯಮ ಕುರಿತು ಎರಡು ದಿನದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಜುಲೈ 4 ರಿಂದ ನಗರದಲ್ಲಿ ಏರ್ಪಡಿಸಿದೆ.

ಚೀನಾ, ಸಿಂಗಪುರ ಮತ್ತು ಆಸ್ಟ್ರೇಲಿಯಾದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಕರ್ನಾಟಕದ ಗಣಿ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ನೇರ ಮಾಹಿತಿ ಪಡೆಯಲಿದ್ದಾರೆ. ಗಣಿಗಾರಿಕೆಗೆ ಹೊಸ ಅವಕಾಶಗಳು, ಹೂಡಿಕೆದಾರರಿಗೆ ಲಭ್ಯವಿರುವ ಸನ್ನಿವೇಶ, ಉಕ್ಕು ತಯಾರಿಕೆಗೆ ಕಬ್ಬಿಣದ ತುಣುಕು ಉದ್ಯಮದ ಉಪಯುಕ್ತತೆ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.

ಗಣಿ ಉದ್ದಿಮೆದಾರರಿಗೆ ಮತ್ತು ಹೂಡಿಕೆದಾರರಿಗೆ ಸಮ್ಮೇಳನದಲ್ಲಿ ಉಕ್ಕು ತಯಾರಿಕೆ ಕುರಿತು ತಾಂತ್ರಿಕ ಮತ್ತು ಔದ್ಯಮಿಕ ಮಾರ್ಗದರ್ಶನ ನೀಡಲಾಗುವುದು. ವಿಶ್ವದಾದ್ಯಂತ ಬಳಕೆಯಲ್ಲಿರುವ ನವೀನ ಮತ್ತು ಸುಧಾರಿತ ಉಕ್ಕು ಮತ್ತು ಕಬ್ಬಿಣ ತಯಾರಿಕೆ ತಂತ್ರಜ್ಞಾನದ ಪರಿಚಯವನ್ನೂ ಸಹ ನೀಡಲಾಗುವುದು. ಆಸ್ಟ್ರಿಯಾದ ಸಿಮನ್ಸ್, ವಿಐಪಿ, ಜಪಾನಿನ ಕೊಬೆಲ್ಕೊ, ಆಸ್ಟ್ರೇಲಿಯಾದ ರಯೋ ಟಿಂಟೋ, ಔಟೋಟಿಕ್ ಮುಂತಾದ ಕಂಪೆನಿಗಳು ತಮ್ಮ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಮುಂದಾಗಿವೆ.

ದೇಶದ ಪ್ರಮುಖ ಉಕ್ಕು ತಯಾರಿಕಾ ಕಂಪೆನಿಗಳಾದ ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಬಿಎಂಎಂ ಇಸ್ಪಾತ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್, ಮುಕುಂದ್ ಲಿಮಿಟೆಡ್, ಜೀನತ್ ಟ್ರಾನ್ಸ್‌ಪೋರ್ಟ್ ಕಂಪೆನಿ ಮತ್ತು ಗಣಿಗಾರಿಕೆಯಲ್ಲಿ ತೊಡಗಿರುವ ಬೃಹತ್ ಉದ್ಯಮ ಎನ್‌ಎಂಡಿಸಿ ಕರ್ನಾಟಕದಲ್ಲಿ ತಮ್ಮ ಅದಿರು ಮೌಲ್ಯವರ್ಧನೆ, ಉಕ್ಕು ಉತ್ಪಾದನಾ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತಿ ತೋರಿವೆ.

ಗಣಿ ಉದ್ಯಮದ ಮೇಲೆ ಹೇರಿದ ನಿರ್ಬಂಧದಿಂದ ರೂ 4,000 ಕೋಟಿ ಆದಾಯವನ್ನು ಕರ್ನಾಟಕವು ಕಳೆದುಕೊಂಡಿಲ್ಲದೆ, 1.50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.

ಸುಪ್ರೀಂಕೋರ್ಟ್ ಗಣಿಗಾರಿಕೆ ಮೇಲಿನ ನಿರ್ಬಂಧವನ್ನು ಭಾಗಶಃ ತೆರವುಗೊಳಿಸಲು ನೀಡಿರುವ ಇತ್ತೀಚಿನ ನಿರ್ದೇಶನ ಗಣಿ ಉದ್ದಿಮೆದಾರರಿಗೆ ಮತ್ತು ಉಕ್ಕು ಕಂಪೆನಿಗಳಿಗೆ ಹರ್ಷ ತಂದಿದೆ.  ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಈಗಾಗಲೇ  ಇರುವ ಉದ್ಯಮಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ಓರ್ ಟೀಮ್ ನಿರ್ದೇಶಕ ಸಚಿನ್ ಸೆಹಗಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.