ಬೆಂಗಳೂರು: ಯಲಹಂಕದ ಕೊಂಡಪ್ಪಲೇಔಟ್ನಲ್ಲಿ ಐದು ತಿಂಗಳ ಗರ್ಭಿಣಿ ಅನುಷ್ಕಾ (22) ಹಾಗೂ ಜ್ಞಾನಭಾರತಿ ಸಮೀಪದ ಮುನೇಶ್ವರನಗರದಲ್ಲಿ ನೇತ್ರಾವತಿ (33) ಎಂಬುವರು ನೇಣಿಗೆ ಶರಣಾಗಿದ್ದಾರೆ.
ಆಂಧ್ರಪ್ರದೇಶದ ಅನುಷ್ಕಾ, ಶಿವಕುಮಾರ್ ಅವರನ್ನು 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿದೆ.
‘ಪತ್ನಿ ಮಗು ಜತೆ ಮಲಗಿದ್ದಳು. ನಾನು ನಡುಮನೆಯಲ್ಲಿ ಮಲಗಿಕೊಂಡೆ. ಬೆಳಿಗ್ಗೆ ಕೋಣೆಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡಿದ್ದಳು’ ಎಂದು ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾಗಿ ಯಲಹಂಕ ಪೊಲೀಸರು ತಿಳಿಸಿದ್ದಾರೆ.
‘ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಳಿಯ, ಕೆಲಸ ಬಿಟ್ಟಿದ್ದ. ವರದಕ್ಷಿಣೆಗಾಗಿ ಆತ ನೀಡುತ್ತಿದ್ದ ಕಿರುಕುಳ ತಾಳಲಾರದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣ: ಮಂಡ್ಯ ಜಿಲ್ಲೆಯವರಾದ ನೇತ್ರಾವತಿ, ಕಟ್ಟಡ ಗುತ್ತಿಗೆದಾರ ಮುನಿಸ್ವಾಮಿ ಎಂಬುವರನ್ನು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳೆ.
‘ಗುರುವಾರ ರಾತ್ರಿ ನೇತ್ರಾವತಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದರು. ಮಗಳ ಜತೆ ಹೊರಗೆ ಹೋಗಿದ್ದ ಮುನಿಸ್ವಾಮಿ, 8.30ರ ಸುಮಾರಿಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಪೋಷಕರ ದೂರನ್ನು ಆಧರಿಸಿ ವರದಕ್ಷಿಣೆ ಕಿರುಕುಳ ಅಡಿ ಮುನಿಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜ್ಞಾನಭಾರತಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.