ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷಾಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಕನ್ನಡ ಗೀತೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಲಾವಿದ ಮಾರ್ಕಂಡೇಯ ಹೇಳಿದರು.
ನಗರದ ಸಜ್ಜನ್ ರಾವ್ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಕಲಾಶ್ರೀ ದಿ.ಆರ್.ವೆಂಕಟೇಶಮೂರ್ತಿ ಸ್ಮಾರಕ ಸಂಸ್ಥೆಯ ಸ್ವರಸಿಂಚನ ಬಳಗವು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕನ್ನಡ ಸಿಂಚನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಅಪರಾಧಗಳನ್ನು ತಡೆಗಟ್ಟುವ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಬದಲು ಸಂಗೀತ ಶಾಲೆಗಳನ್ನು ತೆರೆಯಿರಿ’ ಎಂದು ಹೇಳಿದರು. ಸಂಸ್ಥೆಯು ಕನ್ನಡ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ, ಕನ್ನಡ ಪ್ರಜ್ಞೆಯನ್ನು ಹರಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಲೇಖಕಿ ಡಾ. ಬಿ.ಎಸ್. ಪಾರಿಜಾತ ಅವರು, ‘ವಿದ್ಯಾರ್ಥಿಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು, ಕನ್ನಡ ಸಾಹಿತ್ಯಾಭಿರುಚಿ ಹೆಚ್ಚಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಈ ವೇಳೆ ಕಲಾವಿದ ಎಂ. ಬಸವರಾಜು, ಸಜ್ಜನ್ ರಾವ್ ಸಂಸ್ಥೆಯ ಟ್ರಸ್ಟಿಗಳಾದ ಕಸ್ತೂರಿ ಶ್ಯಾಮಸುಂದರ, ಸುಶೀಲ ಆನಂದರಾವ್, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.