ADVERTISEMENT

ಗುಂಡು ಹಾರಿಸಿ ಮಹಿಳೆ ಕೊಲೆ; ಆಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಕನಕಪುರ: ಜಮೀನಿನಲ್ಲಿ ರಾಗಿ ತೆನೆಯನ್ನು ಆಯುತ್ತಿದ್ದ ಮಹಿಳೆ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ಚಿನ್ನಾಭರಣ ದೋಚಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. 
 
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಮಲ್ಲಾಪುರ ಗ್ರಾಮದ ದುಂಡು ಮಾದಯ್ಯನ ಪತ್ನಿ ಪುಟ್ಟಮ್ಮ (45) ಹತ್ಯೆಯಾದ ಮಹಿಳೆ. ಪುಟ್ಟಮ್ಮನಿಗೆ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಮತ್ತು ಪತಿ ಇದ್ದಾರೆ. 
 
ಬುಧವಾರ ಜಮೀನಿನಲ್ಲಿ ಕುಯಿಲು ಮಾಡಿದ್ದ ರಾಗಿಯನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗಿತ್ತು. ಗುರುವಾರ ಬೆಳಿಗ್ಗೆ ಹೊಲದಲ್ಲಿ ಬಿದ್ದಿದ್ದ ರಾಗಿ ತೆನೆಯನ್ನು ಆಯುತ್ತಿದ್ದ ಸಂದರ್ಭದಲ್ಲಿ ಬಂದೂಕಿನಿಂದ ಕೈ ಮತ್ತು ಹಣೆಗೆ ಗುಂಡು ಹಾರಿಸಲಾಗಿದೆ.  
 
ಗುಂಡಿನ ದಾಳಿಯಿಂದ ಪುಟ್ಟಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಗಳು ಆಕೆಯ ಮೈಮೇಲಿದ್ದ ತಾಳಿ ಸೇರಿದಂತೆ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದೂರದಲ್ಲಿ ದನ ಮೇಯಿಸಲು ಹೋಗಿದ್ದ ಮಹಿಳೆ ಬಂದೂಕಿನ ಶಬ್ದ ಕೇಳಿಸಿಕೊಂಡು ಸ್ಥಳಕ್ಕೆ ಬಂದು ನೋಡಿ, ತಕ್ಷಣವೇ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.
 
 ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಎಎಸ್‌ಪಿ ಶಂತನು ಸಿನ್ಹಾ ಮತ್ತು ಸಿಪಿಐ ವಿ.ಧನಂಜಯ, ಸಬ್ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.