ADVERTISEMENT

ಗೃಹಬಂಧನದಲ್ಲಿದ್ದ ಯುವತಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:46 IST
Last Updated 5 ಜೂನ್ 2013, 19:46 IST

ಬೆಂಗಳೂರು: ನಾಲ್ಕು ವರ್ಷಗಳ ಗೃಹಬಂಧನದಿಂದ ಮುಕ್ತಿ ಪಡೆದು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇಮಾವತಿ (32) ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡಿದೆ ಎಂದು ನಿಮ್ಹಾನ್ಸ್ ವೈದ್ಯರು ಹೇಳಿದ್ದಾರೆ.

`ಮಂಗಳವಾರ ಆಸ್ಪತ್ರೆಗೆ ದಾಖಲಾದ ಹೇಮಾವತಿ ರಾತ್ರಿ ಚೆನ್ನಾಗಿಯೇ ನಿದ್ರೆ ಮಾಡಿದ್ದಾಳೆ. ಅಪೌಷ್ಟಿಕತೆ, ರಕ್ತದೊತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ಆಕೆ, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥಳಲ್ಲ ಎಂಬುದು ಈವರೆಗಿನ ತಪಾಸಣೆಯಿಂದ ಗೊತ್ತಾಗಿದೆ. ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ' ಎಂದು ನಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಎಂ.ವಿ.ಸತೀಶ್ ತಿಳಿಸಿದರು.

ಸತತ 4 ವರ್ಷಗಳಿಂದ ಕತ್ತಲ ಕೋಣೆಯಲ್ಲಿದ್ದ ಹೇಮಾವತಿ ಇನ್ನೂ ಆಘಾತದಿಂದ ಹೊರಬಂದಿಲ್ಲ.  ಮುಕ್ತವಾಗಿ ಮಾತನಾಡಲು ಆಕೆ ಹಿಂದೇಟು ಹಾಕುತ್ತಿದ್ದಾಳೆ. ಸಮಾಲೋಚನೆ ಮೂಲಕ ಆ ಆಘಾತದಿಂದ ಹೊರತರುವ ಪ್ರಯತ್ನ ನಡೆಯುತ್ತಿದೆ. ತೀವ್ರ ನಿಗಾ ಘಟಕದಲ್ಲಿರಿಸಿ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವಾರದೊಳಗೆ ಗುಣಮುಖಳಾಗಿ ಮನೆಗೆ ಮರಳಲಿದ್ದಾಳೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಮತ್ತು ಐಜಿಪಿ ಸುನಿಲ್ ಅಗರ್‌ವಾಲ್  ಬುಧವಾರ ನಿಮ್ಹಾನ್ಸ್‌ಗೆ ಭೇಟಿ ನೀಡಿ ಹೇಮಾವತಿಯ ಆರೋಗ್ಯದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. `ಈಗಾಗಲೇ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂಪೂರ್ಣ ಗುಣಮುಖಳಾದ ಬಳಿಕ ಹೇಳಿಕೆ ಪಡೆದು ಕ್ರಮ ಕೈಗೊಳ್ಳಲಾಗುವುದು' ಎಂದು ಹುನಗುಂದ ಸುದ್ದಿಗಾರರಿಗೆ ತಿಳಿಸಿದರು.

ಸ್ಪಾಂಜ್ ಬಾತ್ಗೃ
ಹಬಂಧನದ ಕಾರಣದಿಂದ ಹೇಮಾವತಿಯ ಬೆರಳುಗಳಲ್ಲಿ ಸುಮಾರು ಎರಡು ಇಂಚಿನಷ್ಟು ಉಗುರುಗಳು ಬೆಳೆದಿದ್ದವು. ಬುಧವಾರ ಆಕೆಯ ಉಗುರುಗಳನ್ನು ಕತ್ತರಿಸಿ, ಸ್ಪಾಂಜ್ ಬಾತ್ (ಸ್ಪಂಜನ್ನು ಒದ್ದೆ ಮಾಡಿ ಮೈ ಒರೆಸುವುದು) ಮಾಡಿಸಲಾಗಿದೆ. ಗಂಟು ಕಟ್ಟಿದ್ದ ಕೂದಲನ್ನು ಸ್ವಚ್ಛಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT