
ಬೆಂಗಳೂರು: `ಸಣ್ಣಕತೆಗಳ ರಚನಾಕಾರರ ಸಾಲಿನಲ್ಲಿ ಸಾಹಿತಿ ಕೆ.ಗೋಪಾಲಕೃಷ್ಣರಾಯರ ಹೆಸರನ್ನು ಪ್ರಸ್ತಾಪಿಸದೇ ತಪ್ಪು ಮಾಡಲಾಗುತ್ತಿದೆ. ಗೋಕೃ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಸಣ್ಣಕತೆಗಳನ್ನು ನೀಡಿದ್ದಾರೆ~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.
ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಗೋಪಾಲಕೃಷ್ಣರಾಯ ಅವರ ಸಮಗ್ರ ಕೃತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಗೋಕೃ ಅವರು ಸಣ್ಣ ಕತೆ ಮಾತ್ರವಲ್ಲ, ಪ್ರಬಂಧ, ಕವಿತೆ, ನಾಟಕ ಸೇರಿದಂತೆ ಎಲ್ಲಾ ವಲಯದಲ್ಲೂ ದೊಡ್ಡ ಮಟ್ಟಿನ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ಜೀವಿತಾವಧಿಯಲ್ಲಿ ಈ ಪುಸ್ತಕಗಳು ಮುದ್ರಣದ ಚೌಕಟ್ಟಿಗೆ ಒಳಪಡಬೇಕಿತ್ತು~ ಎಂದು ವಿಷಾದಿಸಿದ ಅವರು, ` ಯಾವುದೇ ಪ್ರೋತ್ಸಾಹವನ್ನು ಬಯಸದೇ ಅನುಭವವನ್ನು ಅಕ್ಷರಕ್ಕೆ ಇಳಿಸಿ, ವಿಭಿನ್ನ ಚಿಂತನೆಯನ್ನು ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರ ಸರಳ ತತ್ವಗಳು ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶನೀಯ~ ಎಂದರು.
ಗೋಕೃ ಅವರ ಪುತ್ರಿ ಜಾನಕಿ ಶ್ರೀನಿವಾಸ್, `ಮೊದಲಿಗೆ ನನ್ನ ತಂದೆಯ ಸಾಹಿತ್ಯದ ಬಗ್ಗೆ ಅಷ್ಟೇನು ತಿಳಿದುಕೊಂಡಿರಲಿಲ್ಲ. ಕೆಲವು ವರ್ಷಗಳಿಂದೀಚೆಗೆ ತಂದೆಯ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಮನಸ್ಸಾಯಿತು. ಅದರ ಫಲವೇ ಈ ಪುಸ್ತಕ. ತಂದೆ ನೀಡಿದ ಸರಳ ಜೀವನ ಸೂತ್ರಗಳೇ ಎಲ್ಲಾ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವಂತೆ ಮಾಡಿದೆ~ ಎಂದು ಭಾವುಕರಾದರು.
ಇದೇ ಸಂದರ್ಭದಲ್ಲಿ ಗೋಕೃ ಕುರಿತ ವೆಬ್ಸೈಟ್ನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಸಾಹಿತಿ ಡಾ.ಗೀತಾ ರಾಮಾನುಜಂ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ರಮೇಶ್ ಕಾಮತ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.