ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್ಕುಮಾರ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ದಿನಾಂಕ ನಿಗದಿ ಮಾಡುವಂತೆ ಕೋರಿ ಎಸ್ಐಟಿ ಅಧಿಕಾರಿಗಳು ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಮಂಗಳವಾರ ಪತ್ರ ಬರೆದಿದ್ದಾರೆ.
‘ನವೀನ್ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಾನೆ. ಹೀಗಾಗಿ, ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕು’ ಎಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ (ಮಾರ್ಚ್ 12) ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಂಪರು ಪರೀಕ್ಷೆ ಎದುರಿಸಲು ಆರೋಪಿ ಒಪ್ಪಿದ್ದರಿಂದ ಅದಕ್ಕೆ ಅನುಮತಿ ನೀಡಿತ್ತು.
‘ಆರೋಪಿಯನ್ನು ಯಾವ ದಿನಾಂಕದಂದು ಕರೆದುಕೊಂಡು ಬರಬೇಕು ಹಾಗೂ ಪರೀಕ್ಷೆಗೆ ಪೂರ್ಣಗೊಳ್ಳಲು ಎಷ್ಟು ದಿನ ಬೇಕಾಗಬಹುದು ಎಂದು ಪತ್ರದಲ್ಲಿ ಕೇಳಿದ್ದೇವೆ. ಅಲ್ಲಿನ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದ ಕೂಡಲೇ, ನ್ಯಾಯಾಲಯದ ಗಮನಕ್ಕೆ ತಂದು ಆರೋಪಿಯನ್ನು ಮಂಪರು ಪರೀಕ್ಷೆಗೆ ಕರೆದೊಯ್ಯುತ್ತೇವೆ’ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
‘ಮಹಾರಾಷ್ಟ್ರ ಎಸ್ಐಟಿ ಹಾಗೂ ತೆಲಂಗಾಣದ ‘ಆಕ್ಟೋಪಸ್’ (ಭಯೋತ್ಪಾದನಾ ನಿಗ್ರಹ ತಂಡ) ಅಧಿಕಾರಿಗಳು ಮೂರು ದಿನಗಳಿಂದ ನಗರದಲ್ಲಿ ಬೀಡುಬಿಟ್ಟಿದ್ದಾರೆ. ಎಸ್ಐಟಿ ಎಸ್ಪಿ ಹರೀಶ್ ಪಾಂಡೆ ಅವರಿಂದ ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.