ADVERTISEMENT

ಗ್ರಾಹಕರ ವೇದಿಕೆ: ಹುದ್ದೆ ಭರ್ತಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಬೆಂಗಳೂರು: ರಾಜ್ಯದ ಗ್ರಾಹಕ ಆಯೋಗ ಹಾಗೂ ವೇದಿಕೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಭರ್ತಿ ಮಾಡಬೇಕು ಎಂದು ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಬಸವನಗೌಡ ಪಾಟೀಲ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.

ಗ್ರಾಹಕರ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಕುರಿತು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರ ನಿಡಿದರು. `ಉತ್ತರ ಕನ್ನಡ, ಯಾದಗಿರಿ, ಬೀದರ್, ಕೋಲಾರ, ಬೆಂಗಳೂರು ಎರಡನೆಯ ಮತ್ತು ನಾಲ್ಕನೆಯ ಹೆಚ್ಚುವರಿ ಜಿಲ್ಲಾ ಗ್ರಾಹಕ ವೇದಿಕೆಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡದ ಕಾರಣ ಅವು ಅಸ್ತಿತ್ವ ಕಳೆದುಕೊಂಡಿವೆ' ಎಂದು ಅವರು ವಿವರಿಸಿದರು.

ಅಲ್ಲದೆ, ರಾಜ್ಯದ ಗ್ರಾಹಕರ ವೇದಿಕೆಯ ಸದಸ್ಯರೊಬ್ಬರ ಸ್ಥಾನ ವರ್ಷದಿಂದ ಖಾಲಿ ಇದೆ. ಶಿವಮೊಗ್ಗ, ಹಾಸನ, ಕೊಡಗು ಜಿಲ್ಲಾ ಗ್ರಾಹಕರ ವೇದಿಕೆಗಳಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ವಿವಿಧ ಜಿಲ್ಲಾ ವೇದಿಕೆಗಳಲ್ಲಿ ಒಟ್ಟು 18 ಸದಸ್ಯರ ಸ್ಥಾನ ಖಾಲಿ ಇದೆ ಎಂದು ಅವರು ವಿವರಿಸಿದರು. ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.