ಬೆಂಗಳೂರು: ‘ಮಾವಳಿಪುರದಲ್ಲಿ ಘನ ತಾಜ್ಯ ನಿರ್ವಹಣಾ ಘಟಕವು ಸರ್ಮಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸುತ್ತ ಮುತ್ತಲಿನ ಕೆರೆಗಳು ಮಲಿನವಾಗುತ್ತಿವೆ’ ಎಂದು ಹೆಸರಘಟ್ಟದ ಮಾವಳಿಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾವಳಿಪುರದ ಘನತಾಜ್ಯ ಘಟಕಕ್ಕೆ ಮೇಯರ್ ಪದ್ಮಾವತಿ ಅವರು ಭೇಟಿ ನೀಡಿರುತ್ತಾರೆ ಎಂದು ತಿಳಿದು ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ಘಟಕದ ಬಳಿ ಜಮಾಯಿಸಿದರು. ಒಂದು ಗಂಟೆ ಕಾದರೂ ಮೇಯರ್ ಬಾರದಿದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದರು.
‘ಈ ಘಟಕದಿಂದ ಅವೈಜ್ಞಾನಿಕವಾಗಿ ಹರಿಸುತ್ತಿರುವ ಕಲುಷಿತ ನೀರು ಸುತ್ತಮುತ್ತಲಿನ ಕೆರೆಗಳ ಒಡಲು ಸೇರುತ್ತಿದೆ. ಇದೇ ನೀರು ಕುಡಿದ ದನಕರುಗಳು ಅನಾರೋಗ್ಯಕ್ಕೀಡಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಗಮನಕ್ಕೂ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.
‘ಕಸದ ಗಬ್ಬುವಾಸನೆ ಗ್ರಾಮದ ತುಂಬ ಹರಡಿದೆ. ಇದರಿಂದ ನಿತ್ಯ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ’ ಎಂದರು.
‘ಘಟದಲ್ಲಿ ಕಸದ ನೀರನ್ನು ಭೂಮಿಯಲ್ಲಿ ಇಂಗಿಸುತ್ತಿದ್ದಾರೆ. ಇದರಿಂದ ಬೋರ್ವೇಲ್ಗಳ ನೀರು ಕಲುಷಿತಗೊಳ್ಳುತ್ತಿದೆ. ಕುಡಿಯಲು ನೀರು ಸಿಗದೆ ಬೇರೆ ಕಡೆಯಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಂಗಸ್ವಾಮಿ ಹೇಳಿದರು.
‘ಘಟಕದ ಸುತ್ತಮುತ್ತ ಮರ ಬೆಳೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಅದಕ್ಕೆ ಯಾವುದೇ ಕಿಮ್ಮತ್ತನ್ನು ಬಿಬಿಎಂಪಿ ನೀಡಿಲ್ಲ’ ಎಂದು ರೈತ ಮುಖಂಡರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.