ADVERTISEMENT

ಘೋಷಿತ ತಾಲ್ಲೂಕು ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:57 IST
Last Updated 7 ಮಾರ್ಚ್ 2014, 19:57 IST

ಬೆಂಗಳೂರು: ಘೋಷಿತ ತಾಲ್ಲೂಕುಗಳ ರಚನೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣ­­ಗೊಳಿಸಬೇಕೆಂದು ಒತ್ತಾಯಿಸಿ ಘೋಷಿತ ಹೊಸ ತಾಲ್ಲೂಕುಗಳ ರಚನಾ ಹೋರಾಟ ಸಮಿತಿ ಸದಸ್ಯರು ನಗರದ ಮಲ್ಲೇಶ್ವರದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸು­ವು­­ದಾಗಿ 2013ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಲ್ಲದೇ ಪ್ರತಿ ತಾಲ್ಲೂಕಿಗೂ ₨ 2 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಆದರೆ, ಈವರೆಗೂ ಹೊಸ ತಾಲ್ಲೂಕುಗಳು ರಚನೆಯಾಗಿಲ್ಲ ಎಂದು ಪ್ರತಿಭಟನಾ­ಕಾರರು ದೂರಿದರು.

‘ಬಿಜೆಪಿ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹೊಸ ತಾಲ್ಲೂಕು­ಗಳ ರಚನೆಗೆ ತಡೆಯೊಡ್ಡಿದೆ. ರಾಜ­ಕೀಯ ದುರುದ್ದೇಶದಿಂದ ಈ ವಿಷಯ­ದಲ್ಲಿ ವಿಳಂಬ ಧೋರಣೆ ಅನುಸರಿಸು­ತ್ತಿದೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ್‌ ದೂರಿದರು.

‘ಶೀಘ್ರ ತಾಲ್ಲೂಕುಗಳ ರಚನೆ ಮಾಡ­ಬೇಕು. ಇಲ್ಲದಿದ್ದರೆ ಮಾ.15 ರಿಂದ ಘೋಷಿತ ಪ್ರತಿ ತಾಲ್ಲೂಕಿನಲ್ಲೂ ಪ್ರತಿ­ಭ­ಟನೆ ಮಾಡಿ ಸರ್ಕಾರದ ವಿರುದ್ಧ ಜನಾ­ಭಿಪ್ರಾಯ ಮೂಡಿಸುತ್ತೇವೆ. ಲೋಕ­­ಸಭಾ ಚುನಾವಣೆಯ ನಂತರ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಮಾಡು­ತ್ತೇವೆ’ ಎಂದು ಪ್ರಧಾನ ಕಾರ್ಯ­ದರ್ಶಿ ಬಾರಕೂರು ಸತೀಶ ಪೂಜಾರಿ ಹೇಳಿ­ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.