ಬೆಂಗಳೂರು: ವಿ.ಸೋಮಣ್ಣ ಪ್ರತಿಷ್ಠಾನ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ ಅವರಿಗೆ ‘ಜೆ.ಎಚ್.ಪಟೇಲ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ₹50,000 ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ‘ಪ್ರಶಸ್ತಿಯ ಹಣವನ್ನು ಅಂಧರ ಶಾಲೆಗೆ ನೀಡಲು ನಿರ್ಧರಿಸಿದ್ದೇನೆ’ ಎಂದು ಚಂದ್ರೇಗೌಡ ತಿಳಿಸಿದರು. ಜೆ.ಎಚ್.ಪಟೇಲ್ ಅವರೊಂದಿಗಿನ ನೆನಪುಗಳನ್ನು ಬಿಚ್ಚಿಟ್ಟ ಅವರು, ‘ಶಾಸನಸಭೆಯಲ್ಲಿ ಪಟೇಲರು ಇದ್ದರೆ ಮಾತ್ರ ಅದಕ್ಕೆ ಕಳೆ. ಅವರ ವಾಕ್ಚಾತುರ್ಯ, ಹಾಸ್ಯಭರಿತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಉತ್ತಮ ಸಂಸದೀಯ ಪಟುವಾಗಿದ್ದ ಅವರು, ಸಂದಿಗ್ಧ ಪರಿಸ್ಥಿತಿಗಳನ್ನೂ ಸಾವಧಾನದಿಂದ ನಿಭಾಯಿಸುತ್ತಿದ್ದರು’ ಎಂದರು.
‘ಸಂಸತ್ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಲು ಅವಕಾಶವಿತ್ತು. ಆದರೆ, ಪಟೇಲರು ಕನ್ನಡದಲ್ಲೇ ಮಾತನಾಡುವ ಮೂಲಕ ಹಿಂದಿಯೇತರ ಭಾಷೆಗಳಿಗೆ ದನಿ ಕೊಟ್ಟರು. ಅಲ್ಲದೆ, ಪ್ರಾಂತೀಯ ಭಾಷೆಗಳನ್ನು ಅನುವಾದಿಸಲು ಭಾಷಾಂತರಕಾರರನ್ನು ನೇಮಿಸಲಾಯಿತು. ಇದರ ಕೀರ್ತಿ ಪಟೇಲರಿಗೆ ಸಲ್ಲುತ್ತದೆ’ ಎಂದು ಹೇಳಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ‘ಹದಗೆಟ್ಟಿದ್ದ ಹುಬ್ಬಳ್ಳಿ–ಧಾರವಾಡ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಜೆ.ಎಚ್.ಪಟೇಲರಿಗೆ ಮನವಿ ಮಾಡಿದ್ದೆ. ಒಂದು ವರ್ಷದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದರು’ ಎಂದು ನೆನಪು ಮಾಡಿಕೊಂಡರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಚಂದ್ರೇಗೌಡರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದರೂ ಪರಿಸ್ಥಿತಿಯ ಪಿತೂರಿಯಿಂದ ಸಾಧ್ಯವಾಗಲಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.