ಮಹದೇವಪುರ: ದೊಡ್ಡನೆಕ್ಕುಂದಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿನ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ಶಾಸಕರ ವಿಶೇಷ ಅನುದಾನದಡಿ 7.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಬಿಬಿಎಂಪಿ ಸದಸ್ಯ ಎನ್.ಆರ್. ಶ್ರೀಧರ್ರೆಡ್ಡಿ ತಿಳಿಸಿದ್ದಾರೆ.
ಸಮೀಪದ ವೈಕುಂಠ ಬಡಾವಣೆಯಲ್ಲಿ ಇತ್ತೀಚೆಗೆ ಚರಂಡಿ ಕಾಮಗಾರಿಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿಯವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಈಗಾಗಲೇ ಮಾರತ್ಹಳ್ಳಿ ಕೊಳವೆಬಾಯಿ ಬಳಿಯಿಂದ ದೊಡ್ಡನೆಕ್ಕುಂದಿ ಗ್ರಾಮದವರೆಗಿನ ಮುಖ್ಯ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ನೆಕ್ಕುಂದಿಯ ಶ್ರೀರಾಮ ದೇವಾಲಯದ ಎದುರಿನ ರಸ್ತೆ ಮತ್ತು ಚಿನ್ನಪ್ಪ ಬಡಾವಣೆಯಲ್ಲಿನ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದರು.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಲ್ಲದೆ, ಬಡಾವಣೆ ನಿವಾಸಿಗಳ ಸಲಹೆ- ಸೂಚನೆಗಳನ್ನು ಪಡೆದು ಕಾಮಗಾರಿ ಮುಂದುವರೆಸಬೇಕು ಎಂಡಿರು.
ಮುಖಂಡರಾದ ವೆಂಕಟೇಶರೆಡ್ಡಿ, ಕೀರ್ತಿ, ರಾಧಾಕೃಷ್ಣರೆಡ್ಡಿ, ಮುರುಳಿ, ಅಶೋಕ, ಸುನಿಲ್, ನಾಗರಾಜರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.