ADVERTISEMENT

ಜಂತಕಲ್‌ ಪ್ರಕರಣ ಬಳಸಿ ಬಲಿಪಶು ಮಾಡುವ ಯತ್ನ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 20:02 IST
Last Updated 15 ಜೂನ್ 2017, 20:02 IST
ಜಂತಕಲ್‌ ಪ್ರಕರಣ ಬಳಸಿ ಬಲಿಪಶು ಮಾಡುವ ಯತ್ನ: ಕುಮಾರಸ್ವಾಮಿ
ಜಂತಕಲ್‌ ಪ್ರಕರಣ ಬಳಸಿ ಬಲಿಪಶು ಮಾಡುವ ಯತ್ನ: ಕುಮಾರಸ್ವಾಮಿ   

ಬೆಂಗಳೂರು:  ‘ಜಂತಕಲ್‌ ಪ್ರಕರಣ ಮುಂದಿಟ್ಟುಕೊಂಡು ನನ್ನನ್ನು ಬಲಿಪಶು ಮಾಡಲು ಯತ್ನಿಸಲಾಗುತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ‘ಮುಖ್ಯಮಂತ್ರಿಯಾದ ಆರೇ ತಿಂಗಳಿನಲ್ಲಿ  ನನ್ನ ವಿರುದ್ಧ ₹150 ಕೋಟಿ ಲಂಚ ಪಡೆದ ಆರೋಪವನ್ನು ಸದಸ್ಯರೊಬ್ಬರು ಸದನದಲ್ಲಿ ಮಾಡಿದರು. ಅದನ್ನು ಮುಂದಿಟ್ಟುಕೊಂಡು ಅಂದು  ವಿರೋಧ ಪಕ್ಷದಲ್ಲಿದ್ದವರು(ಕಾಂಗ್ರೆಸ್‌) ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆಯನ್ನು ಭೇಟಿಯಾಗಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದರು. ಆದರೆ ಯಾರೊಬ್ಬರೂ ದಾಖಲೆಯನ್ನು ನೀಡಲಿಲ್ಲ’ ಎಂದು ಹೇಳಿದರು.

‘11 ವರ್ಷದ ಬಳಿಕವೂ ಪ್ರಕರಣ ಜೀವಂತವಾಗಿಟ್ಟುಕೊಂಡಿರುವ ಅವರು, ಈಗ ವಿಶೇಷ ತನಿಖಾ ದಳ(ಎಸ್ಐಟಿ) ಬಳಸಿಕೊಂಡು ನನ್ನನ್ನು ಹಣಿಯುವ ಯತ್ನ ಮಾಡುತ್ತಿದ್ದಾರೆ. ಅಂದು ಆರೋಪ ಮಾಡಿದವರು ದಾಖಲೆಗಳಿಗಾಗಿ ಈಗ ಹುಡುಕಲು ಆರಂಭಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಮಾಧ್ಯಮ ಪ್ರತಿನಿಧಿಗಳ ಜತೆ ಪ್ರತ್ಯೇಕವಾಗಿ ಮಾತನಾಡಿದ ಅವರು, ‘ಸರ್ಕಾರ ಕಳೆದ ಒಂದು ವಾರದಿಂದ ಎಷ್ಟು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದು ಗೊತ್ತಿದೆ’ ಎಂದರು.

‘ಜಂತಕಲ್‌ ಗಣಿಗಾರಿಕೆಗೆ ಅನುಮತಿ ನೀಡಿದ್ದರಿಂದ ಒಂದು ಪೈಸೆಯೂ ನಷ್ಟ ಆಗಿಲ್ಲ. ಧರಂಸಿಂಗ್‌ ಅವಧಿಯಲ್ಲಿ ₹ 37 ಕೋಟಿ ನಷ್ಟ ಆಗಿತ್ತು. ಆದರೆ, ಎಸ್‌.ಎಂ.ಕೃಷ್ಣ ,ಧರಂಸಿಂಗ್‌ ಅವಧಿಯ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ತೋರದ ಆತುರ ನನ್ನ  ಪ್ರಕರಣದಲ್ಲಿ ತೋರಿಸುತ್ತಾರೆ’ ಎಂದು ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.