ಬೆಂಗಳೂರು: `ರಾಜ್ಯ ಸರ್ಕಾರ ಕಲೆ ಮತ್ತು ಸಂಸ್ಕೃತಿಗೆ ದೇಶದ ಇನ್ಯಾವ ರಾಜ್ಯಗಳು ನೀಡದಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ, ರಾಜ್ಯದ ಜನಸಾಮಾನ್ಯರು ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ~ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ವಿಷಾದಿಸಿದರು.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬುಧವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಅಕಾಡೆಮಿ ಫಾರ್ ಮ್ಯೂಸಿಕ್ನ ಸಹಯೋಗದಲ್ಲಿ ನಡೆದ `ರಂಗ ತರಂಗ~ ರಾಷ್ಟ್ರೀಯ ನೃತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಕಲೆಗಳ ಬಗ್ಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಸದ್ಬಳಕೆ ಮಾಡಿಕೊಂಡು ಕಲೆಯ ಅಭಿವೃದ್ಧಿಗೆ ಎಲ್ಲಾ ಕಲಾವಿದರು ಮುಂದಾಗಬೇಕು. ಜನಸಾಮಾನ್ಯರು ಕಲೆಗಳ ಬೆಳವಣಿಗೆಯಲ್ಲಿ ಭಾಗಿಗಳಾಗಬೇಕು. ಆಗ ಮಾತ್ರ ಕಲೆಗಳ ಸಮಗ್ರ ಬೆಳವಣಿಗೆ ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಮಾತನಾಡಿ `ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಪ್ರತಿಭೆ ಬೆಳಗುವುದು ಸಾಧ್ಯ. ರಾಜ್ಯದ ಸಂಸ್ಕೃತಿ ವಿಶಿಷ್ಟವಾದದ್ದು. ನಮ್ಮ ರಾಜ್ಯದಲ್ಲಿ ಎಲ್ಲಾ ಕಲೆಗಳನ್ನು ಕಾಣಲು ಸಾಧ್ಯವಿದೆ. ಕನ್ನಡ ನಾಡು ಕಲೆಗಳ ತವರೂರು~ ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಭಾಗ್ಯ ಮಾತನಾಡಿ `ಯುವಜನರನ್ನು ನೃತ್ಯ ಮತ್ತು ಸಂಗೀತ ಕಲೆಗಳ ಕಡೆಗೆ ಸೆಳೆಯುವ ಉದ್ದೇಶದಿಂದ ರಂಗ ತರಂಗ ರಾಷ್ಟ್ರೀಯ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ~ ಎಂದರು.
ಉದ್ಘಾಟನಾ ಸಮಾರಂಭದ ನಂತರ `ನಾಟ್ಯ~ ನೃತ್ಯ ಸಂಸ್ಥೆಯ ಕಲಾವಿದರು `ಸಾರೆ ಜಹಾ ಸೇ ಅಚ್ಚಾ~ ನೃತ್ಯ ರೂಪಕ ಪ್ರದರ್ಶಿಸಿದರು. ಅರುಣಾ ಮೋಹನ್ ಮತ್ತು ತಂಡದಿಂದ ಒಡಿಸ್ಸಿ ನೃತ್ಯ ಮತ್ತು ರೇಖಾ ಹೆಗಡೆ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಮೂರು ದಿನಗಳ ನೃತ್ಯೋತ್ಸವ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರದವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.