ADVERTISEMENT

ಜನ-ಮನ ಸೆಳೆದ ಶ್ವಾನ ಪ್ರೀತಿ...

​ಪ್ರಜಾವಾಣಿ ವಾರ್ತೆ
Published 29 ಜುಲೈ 2012, 18:30 IST
Last Updated 29 ಜುಲೈ 2012, 18:30 IST
ಜನ-ಮನ ಸೆಳೆದ ಶ್ವಾನ ಪ್ರೀತಿ...
ಜನ-ಮನ ಸೆಳೆದ ಶ್ವಾನ ಪ್ರೀತಿ...   

ಬೆಂಗಳೂರು:  ರಜಾ ದಿನಗಳಂದು ಸಾಮಾನ್ಯವಾಗಿ ಕ್ರೀಡಾ ಚಟುವಟಿಕೆಗಳಿಂದ ಸುದ್ದಿ ಮಾಡುವ ನಗರದ ಬಸವನಗುಡಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾನುವಾರ ಶ್ವಾನಗಳ ಕಲರವ. ನಾನಾ ಬಗೆಯ ನಾಯಿಗಳು ಒಂದೆಡೆ ಕಲೆತಿದ್ದವು.

ಬಸವನಗುಡಿಯ ಆಸುಪಾಸಿನ ಪ್ರದೇಶದ ಶ್ವಾನ ಪ್ರೇಮಿಗಳು ತಮ್ಮ ಮುದ್ದಿನ ನಾಯಿಗಳೊಂದಿಗೆ ಹಾಜರಾಗಿದ್ದರು. ಅವರಿಗೆ ತಮ್ಮ ಶ್ವಾನಗಳ ವಿಶೇಷತೆ  ಕುರಿತಾಗಿ ಹೇಳಿಕೊಳ್ಳುವುದಕ್ಕೆ ತವಕ. ಶ್ವಾನಗಳು ಸಹ ಚೂಟಿ ಚಟುವಟಿಕೆಯಿಂದ ಗಮನ ಸೆಳೆದವು.

ಸಾಮಾನ್ಯವಾಗಿ ಬೀದಿ ನಾಯಿಗಳನ್ನು ಕಂಡಾಗ ಕಲ್ಲು ಬಿಸಾಡಿ ತೊಂದರೆ ಕೊಡುವವರೇ ಜಾಸ್ತಿ. ಅಲ್ಲದೆ ನಗರದ ಬೀದಿ ನಾಯಿಗಳ ಬಗ್ಗೆ ಆತಂಕ ಪಡುವವರೇ ಜಾಸ್ತಿ. ಇಂತಹ ನಾಯಿಗಳ ಕುರಿತಾಗಿ ಕಾಳಜಿ ವ್ಯಕ್ತಪಡಿಸುವವರು ಕಡಿಮೆ. ಆದರೆ ವಿದ್ಯಾರ್ಥಿಗಳ ಪ್ರಾಣಿ ಸಹೃದಯ ಸಂಘ ಬೀದಿಯಲ್ಲಿ ಸಿಕ್ಕ ನಾಯಿಗಳನ್ನು ಸಾಕಿದವರನ್ನು ಪ್ರೋತ್ಸಾಹಿಸಲು ಶ್ವಾನ ಪ್ರದರ್ಶನ ಏರ್ಪಡಿಸಿತ್ತು.

ಜರ್ಮನ್ ಶೆಫರ್ಡ್, ಡಾಬರ್‌ಮನ್, ಪಮೋರಿಯನ್, ಪಗ್, ಬೀಗಲ್, ಲ್ಯಾಬೊಡ್ರಲ್ ನಾಯಿಗಳು ಗಮನ ಸೆಳೆದವು. ಭಾರತೀಯ ಮಿಶ್ರ ತಳಿ ಶ್ವಾನಗಳು ಅಧಿಕ ಸಂಖ್ಯೆಯ ್ಲಲಿದ್ದವು.  `ಬೆರಳೆಣಿಕೆಯ ಬೀದಿ ನಾಯಿಗಳು ನಡೆಸುವಂತಹ ಪುಂಡಾಟಿಕೆಯಿಂದ ಬೀದಿ ನಾಯಿಗಳನ್ನು ಅನುಮಾನದಿಂದ ಕಂಡು ಹೊಡೆದು ತೊಂದರೆ ನೀಡುವವರೇ ಜಾಸ್ತಿ. ಅವುಗಳು ಅಮಾಯಕ ಪ್ರಾಣಿಗಳು. ಬೀದಿ ಬದಿಯಲ್ಲಿ ಬಿದ್ದಿದ್ದ ನಾಯಿಗಳನ್ನು ತಂದು ಸಾಕಿರುವ ಮನೆ ಮಂದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ~ ಎಂದು ಕಾರ್ಯಕ್ರಮದ ಸಂಘಟಕ ಪ್ರಣವ್ ಮಾಹಿತಿ ನೀಡಿದರು. 

`ವಿಧೇಯ ನಾಯಿ~ ವಿಭಾಗದಲ್ಲಿ ಉಮಾ ಶಂಕರ್  ಅವರ ಲ್ಯಾಬೋ ನಾಯಿ, ಫ್ಯಾನ್ಸಿ ಡ್ರೆಸ್ ವಿಭಾಗದಲ್ಲಿ ಬೋನಿ ನಾಯಿ ಪ್ರಥಮ ಬಹುಮಾನ ಗಳಿಸಿತು. ನಾಯಿಗಳನ್ನು ಸಾಕುವವರನ್ನು ಪ್ರೋತ್ಸಾಹಿಸಲು ಆಯೋಜಿಸಿದ್ದ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಶ್ರೀಕಾಂತ್ ಬಹುಮಾನ ಗಳಿಸಿದರು.

`ಲ್ಯಾಬೊಡ್ರಲ್ ತಳಿಗೆ ಸೇರಿದ ಡ್ಯಾನಿ ನಾಯಿಯನ್ನು ಎರಡು ವರ್ಷದಿಂದ ಸಾಕುತ್ತಿದ್ದೇವೆ. ಈ ನಾಯಿಯದ್ದು ತಂಟೆ ತಕರಾರು ಇಲ್ಲ. ತುಂಬಾ ಸ್ನೇಹ ಜೀವಿ ನಾಯಿ. ಮೊದಲ ಬಾರಿಗೆ ನಾಯಿಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ~ ಎಂದು ಬಸವನಗುಡಿಯ ಕಲಾ ನಾಗೇಶ್ ತಿಳಿಸಿದರು.

`ಈ ಪ್ರದರ್ಶನವನ್ನು ವಿದ್ಯಾರ್ಥಿಗಳು ಆಯೋಜಿಸುತ್ತಿದ್ದಾರೆ. ಅವರ ಕಾಳಜಿ ಮೆಚ್ಚುವಂತಹುದು. ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಆಟ, ಗೆಳೆಯರೊಂದಿಗೆ ಸುತ್ತಾಟ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಮಯ ವ್ಯರ್ಥ ಮಾಡುತ್ತಾರೆ.

ಈ ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ನಾಯಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ~ ಎಂದರು.  ಪ್ರದರ್ಶನದ ಉದ್ಘಾಟನೆಯಲ್ಲಿ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಶೀಲಾ , ಮಾಜಿ ಶಾಸಕ ಆರ್.ವಿ.ದೇವರಾಜ್, ವೈದ್ಯ ಡಾ.ಶ್ರೀರಾಮ್, ಸಮಾಜಸೇವಕ ದಿನೇಶ್, ಸಂಘಟಕರಾದ ಸ್ವಾಮಿ ಹಾಗೂ ಪ್ರಣವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.