ಬೆಂಗಳೂರು: ಅಂಗಾಂಗ ದಾನ ಮಾಡಲು ಇಚ್ಛಿಸುವ ಚಾಲಕರು ಹಸಿರು ಗುರುತಿನ ಚೀಟಿ ಇರುವ ಚಾಲನಾ ಪರವಾನಗಿಯನ್ನು ಇನ್ನು ಮುಂದೆ ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿಯೂ ಪಡೆದುಕೊಳ್ಳಬಹುದು. ಸಾರಿಗೆ ಇಲಾಖೆಯು ಪ್ರಾಥಮಿಕ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋರಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸುಮಾರು 347 ಮಂದಿಗೆ ಹಸಿರು ಗುರುತಿನ ಚೀಟಿ ಚಾಲನಾ ಪರವಾನಗಿಯನ್ನು ವಿತರಿಸಿದ್ದು, ಇದರ ಯಶಸ್ಸಿನ ನಂತರ ಈಗ ಜಯನಗರದಲ್ಲಿ ಆರಂಭಿಸಿದೆ.
ಈ ಬಗ್ಗೆ ಮಾತನಾಡಿದ ಇಲಾಖೆಯ ಆಯುಕ್ತ ಕೆ.ಆರ್.ಶ್ರೀನಿವಾಸ್, `ಟ್ರಕ್ ಹಾಗೂ ಆಟೊ ಚಾಲಕರು ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ. ಸುಖಾಸುಮ್ಮನೆ ಅಂಗಾಂಗಳು ಮಣ್ಣಾಗುವುದಕ್ಕಿಂತ ಈ ರೀತಿಯಲ್ಲಿ ಬಳಕೆಯಾಗುವುದು ಒಳ್ಳೆಯ ಸಂಗತಿ' ಎಂದು ಹೇಳಿದರು.
`ಪ್ರತಿ ವರ್ಷ 1.15 ಲಕ್ಷ ಚಾಲನಾ ಪರವಾನಗಿಯನ್ನು ವಿತರಿಸಲಾಗುತ್ತಿದೆ. ಆದರೆ ಅಂಗಾಂಗದಾನದ ಬಗೆಗಿನ ಜಾಗೃತಿ ಕೊರತೆಯಿಂದ ಅಂಗಾಂಗ ದಾನಕ್ಕೆ ಮಹತ್ವ ದೊರೆತಿಲ್ಲ. ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಒಬ್ಬ ವ್ಯಕ್ತಿಯಿಂದ ಅಂಗಾಂಗದಾನಕ್ಕೆ ಒಳಪಟ್ಟರೆ ಹಲವು ಜೀವಗಳನ್ನು ಉಳಿಸಬಹುದು' ಎಂದು ತಿಳಿಸಿದರು.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಅಂಗಾಂಗ ಕಸಿ ವಿಭಾಗದ ಮುಖ್ಯಸ್ಥ ಡಾ.ಸೋನಾಲ್, ` ಚಾಲಕರಿಗೆ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದು ಹೀಗೆ ಮುಂದುವರಿದರೆ ಅಂಗಾಂಗದಾನ ಕ್ಷೇತ್ರದಲ್ಲಿ ರಾಜ್ಯ ಮೊದಲನೇ ಸ್ಥಾನ ಪಡೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.