ADVERTISEMENT

ಜೀವ ರಕ್ಷಣೆಯಲ್ಲಿ ಔಷಧ ವಿಜ್ಞಾನದ ಕೊಡುಗೆ ಅಪಾರ: ಪೀಟರ್ ದೊಹರ್ಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: `ಮಾನವನ ಜೀವ ರಕ್ಷಣೆಯಲ್ಲಿ ಔಷಧೀಯ ವಿಜ್ಞಾನದ ಅನ್ವೇಷಣೆಯ ಪಾತ್ರ ಮುಖ್ಯವಾದುದು~ ಎಂದು ಶರೀರ ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪೀಟರ್ ಸಿ. ದೊಹರ್ಟಿ ಅಭಿಪ್ರಾಯ ಪಟ್ಟರು.

ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆಸ್ಟ್ರಿಯಾ ಎನೆಕ ಔಷಧೀಯ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವಿಜ್ಞಾನದ ಮೂಲಕ ಸಾಂಕ್ರಾಮಿಕ ರೋಗಗಳ ನಿರೋಧ~ ವಿಷಯವಾಗಿ  ಉಪನ್ಯಾಸ ನೀಡಿದರು.

`ರೋಗ ಪತ್ತೆಯ ವಿಧಾನಗಳು ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿಯೂ ಔಷಧೀಯ ವಿಜ್ಞಾನ ಕ್ಷೇತ್ರವು ರೋಗ ನಿರೋಧಕಗಳನ್ನು ಸಂಶೋಧಿಸಿ ಜೀವ ಮಾರಕಗಳನ್ನು ತಡೆಯುತ್ತಾ ಬಂದಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ಹಿಂದಿನಿಂದಲೂ ವೈಜ್ಞಾನಿಕ ಕ್ಷೇತ್ರದಲ್ಲಿ ಅನ್ವೇಷಣೆಗಳು ನಡೆಯುತ್ತಲೇ ಬಂದಿವೆ. ಈ ವಿಚಾರದಲ್ಲಿ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರವಾದುದು~ ಎಂದು ಅವರು ತಿಳಿಸಿದರು.

ADVERTISEMENT

`ರೋಗಗಳು ಬರುವ ಮುನ್ನವೇ ರೋಗ ನಿರೋಧಕ ಶಕ್ತಿಯ ಬಗ್ಗೆ ಮುಂಜಾಗ್ರತೆ ವಹಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು ಎಂಬುದು ಪ್ರಾಚಿನ ತಿಳುವಳಿಕೆಯಾಗಿದ್ದು, ರೋಗ ನಿರೋಧಕ ಶಕ್ತಿಯ ಬಗ್ಗೆ ಹಿಂದಿನ ತಲೆಮಾರಿನವರ ತಿಳುವಳಿಕೆ ಸ್ಪಷ್ಟವಾಗಿತ್ತು. ಶಾರೀರಿಕ ಹಾಗೂ ಔಷಧೀಯ ವಿಜ್ಞಾನ ಕ್ಷೇತ್ರಗಳಲ್ಲಿ ಕಳೆದ 60 - 70 ವರ್ಷಗಳಲ್ಲಿ ಸಾಕಷ್ಟು ಅಮೂಲ್ಯ ಸಂಶೋಧನೆಗಳು ನಡೆದಿವೆ~ ಎಂದರು.

`ಔಷಧ ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆಯದಿದ್ದ ಕಾಲದಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿ ಪ್ಲೇಗ್‌ನಿಂದಾಗಿ ಹಲವು ಜನರು ಪ್ರಾಣ ಬಿಡಬೇಕಾಯಿತು. ಕ್ರಿ.ಶ 1348 ರಿಂದ 1350 ರ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ಪ್ಲೇಗ್‌ನಿಂದಾಗಿ ಸುಮಾರು 15 ಲಕ್ಷ ಜನರು ಜೀವ ಕಳೆದುಕೊಂಡರು. ನಂತರದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಇಷ್ಟು ದೊಡ್ಡ ಪ್ರಮಾಣದ ಸಾವುಗಳು ಸಂಭವಿಸಿಲ್ಲ. ಇದೇ ಔಷಧೀಯ ವಿಜ್ಞಾನ ಕ್ಷೇತ್ರದ ಕೊಡುಗೆ~ ಎಂದು ಅವರು ನುಡಿದರು.

`ವಾತಾವರಣದಲ್ಲಿ ಕೆಲವೊಮ್ಮೆ ಅನೇಕ ವಿಷಕಾರಿ ವೈರಸ್‌ಗಳು ಮಾನವನ ಜೀವಕ್ಕೆ ಕುತ್ತು ತರುತ್ತವೆ. 2002-03 ರಲ್ಲಿ ಕಾಣಿಸಿಕೊಂಡ ಸಾರ್ಸ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸುಮಾರು ಎಂಟು ಸಾವಿರ ಜನರು ಬಳಲುವಂತಾಗಿತ್ತು. ಹೀಗಾಗಿ ಹೊಸ ರೋಗಗಳು ಬರುವ ಮುನ್ನವೇ ರೋಗ ನಿರೋಧ ಶಕ್ತಿ ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.