ADVERTISEMENT

ಟಿಪ್ಪು ನೆನಪಿನಲ್ಲಿ ವಿಶೇಷ ಯೋಜನೆಗಳಿಗಾಗಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 20:00 IST
Last Updated 22 ಫೆಬ್ರುವರಿ 2011, 20:00 IST

ಬೆಂಗಳೂರು: ಟಿಪ್ಪು ಸುlಲ್ತಾನ್ ಅವರ ನೆನಪಿನಲ್ಲಿ ರಾಜ್ಯ ಸರ್ಕಾರ ಬರುವ ಬಜೆಟ್‌ನಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಸಂಯುಕ್ತರಂಗದ ಸದಸ್ಯರು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಟಿಪ್ಪು ಸುಲ್ತಾನರ ಜನ್ಮದಿನವನ್ನು ಸರ್ಕಾರವೇ ಆಚರಿಸಬೇಕು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಟಿಪ್ಪು ಭವನ ನಿರ್ಮಿಸಬೇಕು. ಟಿಪ್ಪು ವಂಶಸ್ಥರನ್ನು ನಗರಕ್ಕೆ ಕರೆತಂದು ಅವರಿಗೆ ಅರಸು ಮನೆತನದವರಿಗೆ ನೀಡಿದ ಸವಲತ್ತುಗಳನ್ನು ನೀಡಬೇಕು. ಅವರ ಆಸ್ತಿಪಾಸ್ತಿ ಖಾಸಗಿಯವರ ಸ್ವತ್ತಾಗಿದ್ದು, ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಜೆಟ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಟಿಪ್ಪು ಸುಲ್ತಾನ್ ಅವರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಘೋಷಣೆ ಕೂಗಿದ ಪ್ರತಿಭಟನಾಕಾರರು. ‘ದೇವನಹಳ್ಳಿ ಟಿಪ್ಪು ಜನ್ಮಸ್ಥಳವಾದುದರಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ, ಅಹಿಂದ ಅಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ, ದಲಿತ ಕ್ರೈಸ್ತರ ಒಕ್ಕೂಟದ ರಾಜ್ಯ ಸಂಚಾಲಕ ರೆ.ಡಾ.ಮನೋಹರ್ ಚಂದ್ರಪ್ರಸಾದ್, ಕರ್ನಾಟಕ ಮುಸ್ಲಿಮರ ವೇದಿಕೆ ಅಧ್ಯಕ್ಷ ಎ.ಖಾಸಿಂಸಾಬ್, ಜಾನುವಾರು ಸಂರಕ್ಷಣಾ ಕಾಯ್ದೆ ವಿರೋಧಿ ಒಕ್ಕೂಟದ ಸಂಚಾಲಕ ಮಹಮದ್ ಇಕ್ಬಾಲ್, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಟಿಪ್ಪುವರ್ಧನ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.