ಬೆಂಗಳೂರು: ‘ಟಿಪ್ಪು ಸುಲ್ತಾನ್ ಭಾರತ ಇತಿಹಾಸದ ಹಿಟ್ಲರ್. ಜಗತ್ತಿನಲ್ಲಿಯೇ ಕ್ರೂರ ವ್ಯಕ್ತಿಗಳಾದ ಹಿಟ್ಲರ್ ಮತ್ತು ಮುಸಲೋನಿಯ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಈತ. ಆತನ ಜಯಂತಿಯನ್ನು ಆಚರಿಸಲು ನಿರ್ಧರಿಸಿರುವುದು ರಾಜ್ಯ ಸರ್ಕಾರದ ಮೂರ್ಖತನದ ಪರಮಾವಧಿ’ ಎಂದು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಕಿಡಿಕಾರಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಒಬ್ಬ ನರಹಂತಕ. ಮಲಬಾರಿನ ಮೇಲೆ ದಾಳಿ ಮಾಡಿದಾಗ ಅಲ್ಲಿನ ಹಿಂದೂಗಳನ್ನು ಸೆರೆ ಹಿಡಿದು ಸಾಯಿಸುವಂತೆ ಆತ ಸೇನೆಗೆ ಬರೆದ ಪತ್ರವೇ ಇದಕ್ಕೆ ಸಾಕ್ಷಿ’ ಎಂದರು.
‘ಟಿಪ್ಪು ಹಿಂದೂ ಅಧಿಕಾರಿಗಳ ಓಲೈಕೆಗಾಗಿ ಶೃಂಗೇರಿ, ಕೊಲ್ಲೂರು ಮತ್ತು ನಂಜನಗೂಡು ದೇವಾಲಯಗಳಿಗೆ ದೇಣಿಗೆ ನೀಡಿದ್ದನೇ ಹೊರತು ಭಕ್ತಿಯಿಂದಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈಗ ಕೆಲವು ಸಂಶೋಧಕರು ಟಿಪ್ಪುವನ್ನು ಧರ್ಮ ಸಹಿಷ್ಣು ದೊರೆ ಎಂದು ವೈಭವೀಕರಿಸುತ್ತಿದ್ದಾರೆ. ಆದರೆ, ಆತ ನಾಶಗೊಳಿಸಿದ ದೇವಾಲಯಗಳ ಸಂಖ್ಯೆ ದೊಡ್ಡದಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.