ADVERTISEMENT

ಟಿವಿಸಿಸಿ ಮುಚ್ಚುವುದಿಲ್ಲ: ಆಯುಕ್ತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:47 IST
Last Updated 3 ಜೂನ್ 2013, 19:47 IST
ಟಿವಿಸಿಸಿ ಮುಚ್ಚುವುದಿಲ್ಲ:  ಆಯುಕ್ತ
ಟಿವಿಸಿಸಿ ಮುಚ್ಚುವುದಿಲ್ಲ: ಆಯುಕ್ತ   

ಬೆಂಗಳೂರು: `ಸರಣಿ ಹಗರಣಗಳನ್ನು ಬಯಲಿಗೆ ತಂದಿದ್ದ ಆಯುಕ್ತರ ತಾಂತ್ರಿಕ ತನಿಖಾ ಕೋಶವನ್ನು (ಟಿವಿಸಿಸಿ)  ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಸ್ಪಷ್ಟಪಡಿಸಿದ್ದಾರೆ.

ಟಿವಿಸಿಸಿಯ ಮುಖ್ಯ ಎಂಜಿನಿಯರ್ ಹಾಗೂ ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ಅದನ್ನು ಮುಚ್ಚುವ ಯತ್ನಗಳು ನಡೆದಿವೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಆಯುಕ್ತರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಟಿವಿಸಿಸಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಇಲ್ಲವೆ ಕಾಗದದಲ್ಲಿ ಮಾತ್ರ ಉಳಿಯುವಂತೆ ಅದನ್ನು ದುರ್ಬಲಗೊಳಿಸಲಾಗುತ್ತದೆ ಎಂಬ ಊಹಾಪೋಹಗಳು ಬಿಬಿಎಂಪಿ ಆವರಣದಲ್ಲಿ ಹಬ್ಬಿವೆ. ಈ ಮಧ್ಯೆ ಟಿವಿಸಿಸಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಆಗಿದ್ದ ಎಸ್. ಪ್ರಭಾಕರ್ ಅವರನ್ನು ಗುಣಮಟ್ಟ ನಿಯಂತ್ರಣ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರಿಂದ ಆ ಊಹಾಪೋಹಗಳಿಗೆ ರೆಕ್ಕೆ-ಪುಕ್ಕ ಮೂಡಿವೆ.

ಟಿವಿಸಿಸಿ ಮುಖ್ಯ ಎಂಜಿನಿಯರ್ ಆಗಿದ್ದ ಎನ್.ದೇವರಾಜ್ ಬಿಬಿಎಂಪಿ ಸದಸ್ಯರ ಆಕ್ರೋಶದ ನುಡಿಗಳಿಗೆ ಮನನೊಂದು ಮೇ 31ರಂದು ಸ್ವಯಂನಿವೃತ್ತಿ ಪಡೆದಿದ್ದರು. ಹಗರಣಗಳು ಹೊರ ಬಂದಾಗಲೆಲ್ಲ ದೇವರಾಜ್ ಮತ್ತು ಪ್ರಭಾಕರ್ ಮೇಲೆ ಹರಿಹಾಯುವುದು ರೂಢಿಯಾಗಿತ್ತು. ಟಿವಿಸಿಸಿ ವರದಿ ಪರಿಣಾಮ ಇತ್ತೀಚೆಗೆ ರೂ 522 ಕೋಟಿ ಮೊತ್ತದ ಕಾಮಗಾರಿಗಳು ರದ್ದಾಗಿದ್ದವು.

`ನಾನು ಬಿಬಿಎಂಪಿ ಆಯುಕ್ತನಾಗಿ ಬಂದಮೇಲೆ ಯಾವುದೇ ವರ್ಗಾವಣೆ ಮಾಡಿಲ್ಲ. ಪ್ರಭಾಕರ್ ಅವರ ವರ್ಗಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.