ಬೆಂಗಳೂರು: ಗೋವುಗಳ ರಕ್ಷಣೆಗೆ ತೆರಳಿದ್ದ ಸಾಫ್ಟ್ವೇರ್ ಎಂಜಿನಿಯರ್ ನಂದಿನಿ ಎಂಬುವರ ಮೇಲೆ ಕಸಾಯಿಖಾನೆಯವರು ಹಲ್ಲೆ ನಡೆಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ನಂದಿನಿ ಅವರು ಅ.14ರಂದು (ಶನಿವಾರ) ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪರಿಶೀಲನೆ ನಡೆಸಲು ಪೊಲೀಸರು ಕಸಾಯಿಖಾನೆಗೆ ಹೋಗಿದ್ದರು ಎಂದರು.
‘ಪೊಲೀಸರಿಗೆ ಮಾಹಿತಿ ನೀಡದೆ ಅವರೂ ಅಲ್ಲಿಗೆ ಹೋಗಿದ್ದರು. ಈ ವೇಳೆ ನಂದಿನಿ ಸ್ಥಳದಲ್ಲಿದ್ದ ಆಟೊ ಹಾಗೂ ಮಾಂಸದಂಗಡಿಗೆ ಕಾರಿನಿಂದ ಗುದ್ದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ’ ಎಂದು ಹೇಳಿದರು.
‘ಈ ಸಂಬಂಧ 7 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಕಸಾಯಿಖಾನೆಯಲ್ಲಿದ್ದ 3 ಗೋವುಗಳನ್ನೂ ಪೊಲೀಸರು ರಕ್ಷಿಸಿದ್ದಾರೆ’ ಎಂದರು.
***
ಪ್ರಕರಣ ತಿರುಚುವ ಅವಶ್ಯಕತೆಯಿಲ್ಲ
ಇದೇ ಪ್ರಕರಣ ಸಂಬಂಧ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಟೆಕ್ಕಿ ನಂದಿನಿ ಮೇಲಿನ ಹಲ್ಲೆ ಪ್ರಕರಣವನ್ನು ತಿರುಚುವ ಅವಶ್ಯಕತೆ ಪೊಲೀಸರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಇಲ್ಲ. ಘಟನೆ ಏನಾಗಿದೆಯೋ ಅದನ್ನೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.