ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ರಾಜ್ಯ ಕಾರ್ಯಕಾರಿಣಿ ಸಭೆ ಡಿ.9ರಂದು ನಗರದಲ್ಲಿ ನಡೆಯಲಿದೆ. ಕಳೆದ ವರ್ಷ ಇದೇ ದಿನ ಹಾವೇರಿಯಲ್ಲಿ ಪಕ್ಷದ ಮೊದಲ ಸಮಾವೇಶ ಆಯೋಜಿಸಲಾಗಿತ್ತು. ಅದರ ಅಂಗವಾಗಿ ಈ ಸಭೆ ನಡೆಯಲಿದ್ದು, ಒಂದು ವರ್ಷದಲ್ಲಿ ಪಕ್ಷದ ಬೆಳವಣಿಗೆಯ ಅವಲೋಕನ, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.
ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರುಸೇರ್ಪಡೆ ಮಾಡಿಕೊಳ್ಳುವ ಕುರಿತು ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಆದರೆ, ಅಧಿಕೃತವಾಗಿ ಬಿಜೆಪಿಯಿಂದ ಆಹ್ವಾನ ಬರುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳದಿರುವಂತೆ ಮುಖಂಡರು ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ. ಎನ್ಡಿಎಗೆ ಬೆಂಬಲ ಸೂಚಿಸಿ ಬಿಎಸ್ವೈ ಬರೆದಿರುವ ಪತ್ರಕ್ಕೆ ಇದುವರೆಗೆ ಉತ್ತರ ಬಾರದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.
ಬಿಎಸ್ವೈ ಬಿಜೆಪಿ ಸೇರ್ಪಡೆ: ‘ಮಾಹಿತಿ ಇಲ್ಲ’
‘ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆಯಾಗುವ ವಿಷಯ ಅಥವಾ ಅವರಿಗೆ ಆಹ್ವಾನ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮಾಧ್ಯಮಗಳ ಮೂಲಕ ಬಿಜೆಪಿ ಮುಖಂಡರು ಆಮಂತ್ರಣ ನೀಡುತ್ತಿರುವುದು ವಿಚಿತ್ರ’ .
-ಧನಂಜಯಕುಮಾರ್, ಕೆಜೆಪಿ ಮುಖಂಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.