ADVERTISEMENT

ತಲಘಟ್ಟಪುರದಲ್ಲಿ ಮತ್ತೊಂದು ಶವ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಬೆಂಗಳೂರು: ಸುಬ್ರಹ್ಮಣ್ಯಪುರದಲ್ಲಿ ಮಂಗಳವಾರ ಅತ್ತೆಯನ್ನು ಕೊಲೆ ಮಾಡಿ ಠಾಣೆಗೆ ಶರಣಾಗಿದ್ದ ಲೋಕೇಶ್, ಪತ್ನಿಯ ಪ್ರಿಯಕರ ಅನಿಲ್‌ನನ್ನೂ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ತಲಘಟ್ಟಪುರದ ಅರಣ್ಯ ಪ್ರದೇಶದಲ್ಲಿ ಅನಿಲ್‌ನ ಶವ ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಘಟನೆ ಸಂಬಂಧ ಮತ್ತೊಬ್ಬ ಆರೋಪಿ ಮನೋಜ್ (23) ಎಂಬಾತನನ್ನು ಬಂಧಿಸಿದ್ದಾರೆ.

`ಅನಿಲ್ ಶವದ ಪತ್ತೆಗಾಗಿ ಪೊಲೀಸರ ತಂಡವು ಲೋಕೇಶ್‌ನನ್ನು ಕರೆದುಕೊಂಡು ಮಂಗಳವಾರ ರಾತ್ರಿ ತಲಘಟ್ಟಪುರಕ್ಕೆ ಹೋಗಿತ್ತು. ನಾಗೇಗೌಡನಪಾಳ್ಯ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಯಿತು. ದುಷ್ಕರ್ಮಿಗಳು ಆತನ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಅನಿಲ್‌ನನ್ನು ಕೊಲೆ ಮಾಡಿದೆ ಎಂದು ಲೋಕೇಶ್ ಹೇಳಿದ್ದಾನೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಬ್ಬ ಆರೋಪಿ ಮನೋಜ್, ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಅನಿಲ್‌ನನ್ನು ಮನೆಯಿಂದ ಕಾರಿನಲ್ಲಿ ಅಪಹರಿಸಿ ಈ ಕೃತ್ಯ ಎಸಗಿದ್ದರು. ನಂತರ ಅಮೃತಾನಗರದಲ್ಲಿರುವ ಪತ್ನಿ ಚಂದ್ರಕಲಾ ಅವರ ಮನೆಗೆ ಹೋದ ಲೋಕೇಶ್, ಅತ್ತೆ ಕಮಲಮ್ಮ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.