ಬೆಂಗಳೂರು: ಮೂರು ತಿಂಗಳಿನಿಂದ ಗೃಹಬಂಧನದಲ್ಲಿದ್ದ 75 ವರ್ಷದ ಮುನಿಯಮ್ಮ ಅವರನ್ನು ಮಾರತ್ತಹಳ್ಳಿ ಪೊಲೀಸರು ಗುರುವಾರ ಬಂಧಮುಕ್ತಗೊಳಿಸಿದರು.
ಕಾಡುಬೀಸನಹಳ್ಳಿಯ ಹಳೆ ಮನೆಯೊಂದರಲ್ಲಿ ಅವರನ್ನು ಮಗನೇ ಕೂಡಿ ಹಾಕಿದ್ದ. ಗುರುವಾರ ಬೆಳಿಗ್ಗೆ ಮುನಿಯಮ್ಮ ಊಟ–ನೀರು ಕೊಡುವಂತೆ ದಾರಿಹೋಕರನ್ನು ಕಿಟಕಿಯಿಂದಲೇ ಕೇಳುತ್ತಿದ್ದರು. ಅದನ್ನು ನೋಡಿ ಯುವತಿಯೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ವಿಷಯ ತಿಳಿಸಿದ್ದರು.
ಆ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಅವರನ್ನು ಹೊರಗೆ ಕರೆದುಕೊಂಡು ಬಂದರು. ನಂತರ ಹೋಟೆಲ್ನಲ್ಲಿ ಊಟ ಮಾಡಿಸಿ ಠಾಣೆಗೆ ಕರೆದೊಯ್ದರು.
ಮಗನನ್ನು ಕರೆಸಿ ವಿಚಾರಣೆ ನಡೆಸಿದಾಗ, ‘ತಾಯಿ ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದರು. ಹೇಳದೆ–ಕೇಳದೆ ಮನೆಯಿಂದ ಹೊರಗೆ ಹೋಗಿ ಬಿಡುತ್ತಿದ್ದರು. ಪ್ರತಿದಿನ ಅವರನ್ನು ಹುಡುಕುವುದೇ ಕೆಲಸವಾಗಿತ್ತು. ಹೀಗಾಗಿ, ಮನೆಯಲ್ಲಿ ಕೂಡಿಟ್ಟಿದ್ದೆ. ಪ್ರತಿದಿನ ನಾನೇ ಊಟ ಕೊಟ್ಟು ಬರುತ್ತಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದಾನೆ. ಆಗ ಪೊಲೀಸರು, ‘ಇನ್ನೊಮ್ಮೆ ಈ ರೀತಿ ನಡೆದುಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಸಿ ತಾಯಿಯನ್ನು ಆತನ ಜತೆ ಕಳುಹಿಸಿಕೊಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.