ಬೆಂಗಳೂರು: ಪ್ರಕಾಶನಗರದ 7ನೇ ಮುಖ್ಯರಸ್ತೆಯ ನಿವಾಸಿ ಸಾವಿತ್ರಮ್ಮ (60) ಹಾಗೂ ಅವರ ಮಗಳು ಮಂಜುಳಾ (37) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ಮನೆಯಿಂದ ಸೋಮವಾರ ಬೆಳಿಗ್ಗೆ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ.
ಸಾವಿತ್ರಮ್ಮರ ಪತಿ 2004ರಲ್ಲಿ ತೀರಿಕೊಂಡಿದ್ದಾರೆ. ಮಗ ಸಹ ಅವರಿಂದ ಪ್ರತ್ಯೇಕವಾಗಿ ಕೆಂಗೇರಿಯಲ್ಲಿ ವಾಸವಿದ್ದಾರೆ. ಸ್ವಂತ ಮನೆಯಲ್ಲಿ ಅವರು ಮಗಳ ಜತೆ ನೆಲೆಸಿದ್ದರು. ಮನೆ ಎದುರಿನ ಎರಡು ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಬಾಡಿಗೆಯಿಂದ ಬರುವ ಹಣದಲ್ಲೇ ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
37 ವರ್ಷವಾದರೂ ಮಗಳಿಗೆ ಮದುವೆ ಮಾಡಲು ಆಗಿಲ್ಲ ಎಂದು ತಾಯಿ ನೊಂದಿದ್ದರು. ಅದೇ ಕಾರಣಕ್ಕೆ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
‘ಮನೆಯ ಮಲಗುವ ಕೋಣೆಯಲ್ಲಿರುವ ಕಬ್ಬಿಣದ ರಾಡ್ಗೆ ಇಬ್ಬರೂ ಪ್ರತ್ಯೇಕವಾಗಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರ ಮಾಹಿತಿ ಸಿಗಲಿದೆ’ ಎಂದರು.
10 ವರ್ಷಗಳ ಹಿಂದೆಯೇ ತಾಯಿಯನ್ನು ತೊರೆದಿದ್ದ ಮಗ, ಪ್ರತ್ಯೇಕವಾಗಿ ವಾಸವಿದ್ದದ್ದು ಏಕೆ? ಹಾಗೂ ತಾಯಿ ಮತ್ತು ಮಗನ ನಡುವೆ ಜಗಳವೇನಾದರೂ ಆಗಿತ್ತಾ? ಎಂಬುದನ್ನು ತಿಳಿದುಕೊಳ್ಳುತ್ತಿರುವ ಪೊಲೀಸರು, ಆ ಸಂಬಂಧ ಮಗನ ಹೇಳಿಕೆ ಪಡೆದುಕೊಂಡಿದ್ದಾರೆ.
‘ಆಗಾಗ ತಾಯಿ, ಸಹೋದರಿಯನ್ನು ಭೇಟಿಯಾಗುತ್ತಿದೆ. ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನನಗೂ ನೋವನ್ನುಂಟು ಮಾಡಿದೆ. ಕಾರಣವೇನು ಎಂಬುದನ್ನು ನೀವೇ(ಪೊಲೀಸರು) ಪತ್ತೆ ಹಚ್ಚಬೇಕು’ ಎಂದು ಮಗ ಹೇಳಿರುವುದಾಗಿ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.