ADVERTISEMENT

ತಿಂಗಳ ಎರಡನೇ ಭಾನುವಾರ ‘ಸಂಚಾರ ಮುಕ್ತ ದಿನ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 20:11 IST
Last Updated 7 ಡಿಸೆಂಬರ್ 2017, 20:11 IST
ಸಚಿವ ಎಚ್‌.ಎಂ.ರೇವಣ್ಣ ಅವರು ಟ್ರ್ಯಾಕ್ಟರ್‌ ಚಾಲಕರೊಬ್ಬರಿಗೆ ಚಾಲನಾ ಪರವಾನಗಿ ಪತ್ರ ವಿತರಿಸಿದರು. ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ, ಜಿಲ್ಲಾಪಂಚಾಯಿತಿ ಸದಸ್ಯರಾದ ಸಿ.ವೆಂಕಟೇಶ್‌, ಲಾವಣ್ಯ ನರಸಿಂಹಮೂರ್ತಿ, ಕಾಂಗ್ರೆಸ್‌ ಮುಖಂಡ ಎಂ.ಎನ್‌.ಗೋಪಾಲಕೃಷ್ಣ ಇದ್ದರು
ಸಚಿವ ಎಚ್‌.ಎಂ.ರೇವಣ್ಣ ಅವರು ಟ್ರ್ಯಾಕ್ಟರ್‌ ಚಾಲಕರೊಬ್ಬರಿಗೆ ಚಾಲನಾ ಪರವಾನಗಿ ಪತ್ರ ವಿತರಿಸಿದರು. ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ, ಜಿಲ್ಲಾಪಂಚಾಯಿತಿ ಸದಸ್ಯರಾದ ಸಿ.ವೆಂಕಟೇಶ್‌, ಲಾವಣ್ಯ ನರಸಿಂಹಮೂರ್ತಿ, ಕಾಂಗ್ರೆಸ್‌ ಮುಖಂಡ ಎಂ.ಎನ್‌.ಗೋಪಾಲಕೃಷ್ಣ ಇದ್ದರು   

ಬೆಂಗಳೂರು: ‘ನಗರದಲ್ಲಿನ ಸಂಚಾರದಟ್ಟಣೆ ನಿಯಂತ್ರಿಸಲು ಹಾಗೂ ವಾಯುಮಾಲಿನ್ಯ ತಗ್ಗಿಸಲು ಪ್ರತಿ ತಿಂಗಳ ಎರಡನೇ ಭಾನುವಾರ ‘ಸಂಚಾರ ಮುಕ್ತ ದಿನ’ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.

ಯಲಹಂಕ ಸಮೀಪದ ಸಿಂಗನಾಯಕನ ಹಳ್ಳಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮುಂದೊಂದು ದಿನ ಅಂತಹ ಸ್ಥಿತಿ ನಿರ್ಮಾಣ ಆಗದಿರಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸಂಚಾರಮುಕ್ತ ದಿನದಂದು ಎಲ್ಲರೂ ಬಿಎಂಟಿಸಿ ಬಸ್‌ ಬಳಸಬೇಕು. ಇದರಿಂದ ಉತ್ತಮಗಾಳಿ ಸೇವಿಸಿ, ಆರೋಗ್ಯಕರ ಜೀವನ ನಡೆಸಲು ಸಹಕಾರಿ ಯಾಗುತ್ತದೆ. ಇದರ ಅನುಷ್ಟಾನಕ್ಕೆ ಸಂಘ–ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿರುವ 5 ಲಕ್ಷ ಟ್ರ್ಯಾಕ್ಟರ್‌ಗಳ ಪೈಕಿ 2 ಲಕ್ಷ ಚಾಲಕರು ಮಾತ್ರ ಚಾಲನಾ ಪರವಾನಗಿ ಹೊಂದಿದ್ದಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಹಾಗಾಗಿ ‘ರೈತಸಾರಥಿ’ ಯೋಜನೆಯಡಿ ಎಲ್ಲಾ ಚಾಲಕರಿಗೂ ತರಬೇತಿ ನೀಡಿ, ಚಾಲನಾ ಪರವಾನಗಿ ನೀಡಲು ಚಿಂತಿಸಲಾಗಿದೆ’ ಎಂದು ತಿಳಿಸಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ಈ ಭಾಗದಲ್ಲಿ 44 ಬಸ್‌ಗಳ ಸೇವೆ ಸ್ಥಗಿತಗೊಳಿಸಿರುವುದರಿಂದ ಜನರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದು, ಹಣಸಂಗ್ರಹಣೆ ಆಗುತ್ತಿಲ್ಲ ಎನ್ನುತ್ತಾರೆ. ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿರುವ ಕಡೆಗಳಿಗೆ ಬಸ್‌ಸಂಚಾರ ಆರಂಭಿಸಬೇಕು’ ಎಂದು ಸೂಚಿಸಿದರು.

‘ಚಾಲನಾ ಪಥ ನಿರ್ಮಾಣಕ್ಕಾಗಿ 3 ಎಕರೆ ಜಾಗವನ್ನು ನೀಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಜಾಗ ವಿದ್ದು, ಕಂದಾಯ ಅಧಿಕಾರಿಗಳಿಂದ ಸಮೀಕ್ಷೆ ಕಾರ್ಯ ನಡೆಸಿ, ಭೂಮಿ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.