ಮಾಗಡಿ: ತಿರುವೆಂಗಳನಾಥ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಭಕ್ತಸಾಗರದ ಸಂಭ್ರಮದ ನಡುವೆ ನಡೆಯಿತು.
ಶುಕ್ರವಾರ ಬೆಳಿಗ್ಗೆ 9ಕ್ಕೆ ತಹಶೀಲ್ದಾರ್ ಎನ್.ಶಿವಕುಮಾರ್ ದಂಪತಿ ಯಾತ್ರಾ ದಾನ ಸೇವೆ ನೆರವೇರಿಸಿದರು. ಇದಕ್ಕೂ ಮುನ್ನ ಸಾವಿರಾರು ಭಕ್ತರು ದೇಗುಲದ ಪಶ್ಚಿಮ ದ್ವಾರದ ಮುಂದೆ ಮೈಲಿ ಉದ್ದದ ಸಾಲಲ್ಲಿ ನಿಂತು ದೇವರ ದರ್ಶನ ಪಡೆದರು.
ಅಲಂಕೃತ ಉತ್ಸವ ಮೂರ್ತಿಯನ್ನು ವಿವಿಧ ಅರವಟಿಗೆಗಳಿಗೆ ಕೊಂಡೊಯ್ದು ಪೂಜೆ ಸ್ವೀಕರಿಸಿದ ನಂತರ ಹೂವಿನಿಂದ ಅಲಂಕೃತವಾಗಿದ್ದ ರಥದ ಮೇಲೆ ಇಟ್ಟು ಪೂಜಿಸಲಾಯಿತು. 12.30ಕ್ಕೆ ಆರಂಭ ವಾಗಬೇಕಿದ್ದ ರಥೋತ್ಸವ ವಿಳಂಬವಾಗಿ ಮಧ್ಯಾಹ್ನ1ಕ್ಕೆ ನಡೆಯಿತು.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಮುಖಂಡರಾದ ಎಚ್.ಸಿ.ಬಾಲಕೃಷ್ಣ, ಎ.ಮಂಜುನಾಥ, ಎ.ಎಚ್.ಬಸವರಾಜು, ಡಾ.ರಂಗಧಾಮಯ್ಯ, ಬಿ.ಎಚ್.ಮಹೇಶಯ್ಯ ರಥಕ್ಕೆ ಪೂಜೆ ಸಲ್ಲಿಸಿದ ರಥ ಎಳೆದರು. ಸತತ ನಾಲ್ಕು ದಿನಗಳ ಕಾಲ ರಜೆ ಇದ್ದ ಕಾರಣ
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಅರವಟಿಗೆಗೆಳಲ್ಲಿ ನೀರು ಮಜ್ಜಿಗೆ ಪಾನಕ, ಹಲಸಿನ ಹಣ್ಣಿನ ರಸಾಯನ, ಬೇಲದ ಹಣ್ಣಿನ ಪಾನಕ ವಿತರಿಸಲಾಯಿತು. ಮರಾಠ ರಂಗ ನಾಥಸ್ವಾಮಿ ಅರವಟಿಗೆಯಲ್ಲಿ ಹಿರಿಯ ರಾದ ಕೃಷ್ಣೋಜಿರಾವ್ ರಸಾಯನ, ಕೋಸುಂಬರಿ, ನೀರು ಮಜ್ಜಿಗೆ ಪಾನಕ ವಿತರಿಸಿದರು.
ಭಕ್ತರ ನಡುವೆ ಸಿಲುಕಿದ ಸಚಿವರ ಕಾರು
ರಥಬೀದಿಯ ಎರಡು ಕಡೆಗಳಲ್ಲಿ ಅರವಟಿಗೆಗಳ ಮುಂದೆ ವಾಹನಗಳನ್ನು ನಿಲ್ಲಿಸಿದ್ದರಿಂದ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರ ನಡುವೆ ನೂಕುನುಗ್ಗಲು ಉಂಟಾಯಿತು.
ರಥೋತ್ಸವದಲ್ಲಿ ಭಾಗವಹಿಸಲು ಬಂದ ಸಚಿವ ಎಚ್.ಎಂ.ರೇವಣ್ಣ ಅವರ ವಾಹನವೂ ಭಕ್ತರ ನೂಕುನುಗ್ಗಲಿನ ನಡುವೆ ಸಿಲುಕಿ ಅರ್ಧಗಂಟೆ ಚಲಿಸಲಾಗಲಿಲ್ಲ. ಪೊಲೀಸರು ಸಚಿವರ ಕಾರು ದೇಗುಲದತ್ತ ಚಲಿಸಲು ಅನುವು ಮಾಡಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.