ADVERTISEMENT

ದಸರೆಗೆ ಜಾಗತಿಕ ಮಟ್ಟದ ಪ್ರಚಾರ: ಸಚಿವ ಮನವಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 20:19 IST
Last Updated 5 ಸೆಪ್ಟೆಂಬರ್ 2013, 20:19 IST

ಬೆಂಗಳೂರು: ಮೈಸೂರು ದಸರಾ ಉತ್ಸವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡುವಂತೆ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿವಿಧ ದೇಶಗಳ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ 18 ದೇಶಗಳ ಕಾನ್ಸುಲೇಟ್ ಪ್ರತಿನಿಧಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ದೇಶಗಳಲ್ಲಿ ಮೈಸೂರು ದಸರಾ ಕುರಿತು ವೆಬ್‌ಸೈಟ್‌ಗಳಲ್ಲಿ ವಿವರಗಳನ್ನು ಪ್ರಕಟಿಸಲಾಗುವುದು. ವಿದೇಶಗಳಿಂದ ಬರುವ ಅತಿಥಿಗಳಿಗೆ ದಸರಾ ಕಾರ್ಯಕ್ರಮಗಳು ಮತ್ತು ಜಂಬೂ ಸವಾರಿ ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿದೇಶಿ ಅತಿಥಿಗಳಿಗೆ ಮಾರ್ಗದರ್ಶನ ಮತ್ತು ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲು ವಿಶೇಷ ತಂಡಗಳನ್ನು ರಚಿಸಲಾಗುವುದು ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರವಾಗಿ ತೆರಳಲು ಅನುಕೂಲವಾಗುವಂತೆ ವಿಶೇಷ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಮೈಸೂರಿಗೆ ಬರುವವರಿಗೆ ಆನ್‌ಲೈನ್ ಮೂಲಕ ಹೋಟೆಲ್ ಮತ್ತು ಬಸ್‌ಗಳನ್ನು ಬುಕಿಂಗ್ ಮಾಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಜಪಾನ್, ಫ್ರಾನ್ಸ್, ನೆದರ್‌ಲ್ಯಾಂಡ್, ಜರ್ಮನಿ, ಪೆರು, ಮಾಲ್ಡಿವ್ಸ್, ಆಸ್ಟ್ರೇಲಿಯಾ, ರುವಾಂಡ, ಸಾಲ್ವೆಡಾರ್ ಐವರಿ ಕೋಸ್ಟ್ ಮತ್ತು  ಶ್ರಿಲಂಕಾಗಳ ಕಾನ್ಸುಲೇಟ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.