ADVERTISEMENT

`ದಾಖಲೆ ದುರ್ಬಳಕೆ: ಮುನ್ನೆಚ್ಚರಿಕೆ ವಹಿಸಿ'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 20:13 IST
Last Updated 1 ಜುಲೈ 2013, 20:13 IST

ಬೆಂಗಳೂರು: `ಹೆಚ್ಚು ಅಪರಾಧ ಪ್ರಕರಣಗಳು ಮೊಬೈಲ್ ನೆಟ್‌ವರ್ಕ್ ಮೂಲಕ ನಡೆಯುತ್ತವೆ. ಆದ್ದರಿಂದ ಮೊಬೈಲ್ ಫೋನ್ ಸಂಪರ್ಕ ಪಡೆಯುವಾಗ ಭಾವಚಿತ್ರ, ದೂರವಾಣಿ ಬಿಲ್ ಸೇರಿದಂತೆ ಸಮರ್ಪಕ ದಾಖಲೆಗಳನ್ನು ಒದಗಿಸಬೇಕು ಮತ್ತು ದಾಖಲೆಗಳು ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು' ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಸಲಹೆಗಾರ ಡಾ.ಸಿಬಿಚೆನ್ ಕೆ.ಮ್ಯಾಥ್ಯೂ ಹೇಳಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯು ಸೋಮವಾರ ನಗರದಲ್ಲಿ ಆಯೋಜಿಸಿದ್ದ `ದೂರಸಂಪರ್ಕ ಗ್ರಾಹಕರ ರಕ್ಷಣೆಗೆ ಟ್ರಾಯ್ ತೆಗೆದುಕೊಂಡ ಕ್ರಮಗಳು' ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, `ಟ್ವಿಟರ್, ಫೇಸ್‌ಬುಕ್‌ನಂಹ ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಇವುಗಳ ಬಳಕೆಯ ಕುರಿತು ಎಚ್ಚರಿಕೆ ವಹಿಸಬೇಕು. ಅನಾಮಿಕ ದೂರವಾಣಿ ಕರೆಗಳು, ಸಂದೇಶಗಳು ಬಂದಲ್ಲಿ ತಕ್ಷಣ ದೂರು ದಾಖಲಿಸಬೇಕು' ಎಂದರು.

`ಗ್ರಾಹಕರಿಗೆ ದೂರಸಂಪರ್ಕ ಸೇವೆಗಳ ಕುರಿತು ಮಾಹಿತಿ ನೀಡಲು ಪ್ರಾಧಿಕಾರವು ದೇಶದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಸಂಪರ್ಕ ಕೆಂದ್ರಗಳನ್ನು ತೆರೆದಿದೆ. ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಹೇಳಿದರು.

`ಸಾರ್ವಜನಿಕರಿಗೆ ಸೇವೆ ಒದಗಿಸುವ ಪ್ರತಿ ಇಲಾಖೆ ವೆಬ್‌ಸೈಟ್ ಕುರಿತು ಜನತೆಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಈ ಕುರಿತು ಮಾಹಿತಿ ನೀಡಲು ಸ್ಥಳೀಯ ಭಾಷೆಯಲ್ಲಿ ಮಾಹಿತಿ ಪುಸ್ತಕವನ್ನು ಹೊರತರಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.