ಬೆಂಗಳೂರು: ಉಲ್ಲಾಳು ವಾರ್ಡ್ನ ದುಬಾಸಿಪಾಳ್ಯ ಕೆರೆಯ ನಡಿಗೆ ಪಥ ಕುಸಿದಿರುವುದು ಹಾಗೂ ಜಲಮೂಲದ ಒಡಲಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
‘ದುಬಾಸಿಪಾಳ್ಯ ಕೆರೆಯ ನಡಿಗೆ ಪಥ ಕುಸಿತ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಜೂನ್ 28 ವರದಿ ಪ್ರಕಟಗೊಂಡಿತ್ತು. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಲ್ಕು ತಿಂಗಳ ಹಿಂದೆ ಕೆರೆಯನ್ನು ಅಭಿವೃದ್ಧಿ ಪಡಿಸಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಗೆ ನಡಿಗೆ ಪಥದಲ್ಲಿ ಮಣ್ಣು ಕುಸಿದಿದೆ. ಇದರಿಂದ ಸ್ಲ್ಯಾಬ್ಗಳು ಕುಸಿಯುತ್ತಿವೆ. ಕೆರೆಯ ಒಡಲಿಗೆ ಕೊಳಚೆ ನೀರು ಸೇರಿ ಮಲಿನಗೊಳ್ಳುತ್ತಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿತ್ತು.
‘ಕೆರೆಯ ದುಸ್ಥಿತಿಯಿಂದ ನಿಸರ್ಗ ಬಡಾವಣೆ, ಅರಣ್ಯ ಬಡಾವಣೆ,ಜ್ಞಾನಭಾರತಿ, ವಳಗೇರಹಳ್ಳಿ ಬಡಾವಣೆಗಳ ನಾಗರಿಕರ ನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ದುಸ್ಥಿತಿಯಲ್ಲಿರುವ ಕೆರೆಯನ್ನು ಸುಧಾರಿಸಲು ಕ್ರಮ ಕೈಗೊಂಡು ಆರು ವಾರಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಆಯೋಗವು ಬಿಡಿಎ ಆಯುಕ್ತರು ಹಾಗೂ ಜಲಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.