ADVERTISEMENT

ದೂರ ಶಿಕ್ಷಣ ಪ್ರಗತಿಯ ಮಾಧ್ಯಮವಾಗಲಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಯಲಹಂಕ: `ದೂರ ಶಿಕ್ಷಣವು ಕೃಷಿಯನ್ನು ದೂರುವ ಶಿಕ್ಷಣವಾಗದೆ ಶಿಕ್ಷಣದಿಂದ ದೂರ ಸರಿದವರನ್ನು ಮರಳಿ ಪ್ರಗತಿಯತ್ತ ಬಲು ದೂರ ಕೊಂಡೊಯ್ಯುವ ಶಿಕ್ಷಣ ಮಾಧ್ಯಮವಾಗಬೇಕು~ ಎಂದು  ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ. ಆನಂದ್ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ `ಕೃಷಿಯಲ್ಲಿ ದೂರ ಶಿಕ್ಷಣ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಇಲ್ಲಿ ಕಲಿಸುವ ಶಿಕ್ಷಕರು ನಾವು ಕಲಿಸುತ್ತೇವೆ ಮತ್ತು ನಾವೂ ಸಹ ಕಲಿಯುತ್ತೇವೆ ಎಂಬ ಧ್ಯೇಯದಿಂದ ಕೇವಲ ರೈತರಿಗಾಗಿ ದುಡಿಯದೆ, ಅವರೊಟ್ಟಿಗೆ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು~ ಎಂದು ಕರೆ ನೀಡಿದರು.

`ರೈತರು ಬೆಳೆಯುವ ಬೆಳೆಯ ಬೆಲೆಗಿಂತ ಅವರ ಬದುಕಿಗೆ ಬೆಲೆ ಬರಬೇಕು. ಆ ರೀತಿಯ ಬಯಕೆಗೆ ಈ ಶಿಕ್ಷಣ ಇಂಬು ನೀಡಲಿ~ ಎಂದು ಆಶಿಸಿದರು.

ವಿ.ವಿ. ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, `ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ 1100 ವಿದ್ಯಾರ್ಥಿಗಳು ದಾಖಲಾಗುತ್ತ್ದ್ದಿದು, ಕೃಷಿ ವಿಜ್ಞಾನವನ್ನು ರೈತರಿಗೆ ತಲುಪಿಸಲು ಈ ಸಂಖ್ಯೆ ಸಾಲದು. ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಸುಮಾರು 8-10 ವರ್ಷಗಳು ಹಿಡಿಯುತ್ತದೆ. ಈ ದಿಸೆಯಲ್ಲಿ ತಂತ್ರಜ್ಞಾನವನ್ನು ಬಹುಬೇಗನೆ ರೈತರಿಗೆ ನೇರವಾಗಿ ತಲುಪಿಸಲು ದೂರ ಶಿಕ್ಷಣ ನೆರವಾಗಲಿದೆ~ ಎಂದರು. 
ನಿವೃತ್ತ ಕೃಷಿ ವಿಸ್ತರಣಾ ನಿರ್ದೇಶಕ ಪ್ರೊ.ವಿ. ವೀರಭದ್ರಯ್ಯ ಮಾತನಾಡಿ, `ಕೃಷಿ ವಿಜ್ಞಾನ ಮತ್ತು ತಾಂತ್ರಿಕತೆಯನ್ನು ರೈತರಿಗೆ, ಯುವಕ-ಯುವತಿಯರಿಗೆ ನೇರವಾಗಿ ತಲುಪಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಔಪಚಾರಿಕವಾಗಿ ದೂರ ಶಿಕ್ಷಣದಲ್ಲಿ ಸಮಗ್ರ ಕೃಷಿ ಪದ್ಧತಿ ಮತ್ತು ಕೋಯ್ಲೋತ್ತರ ಸಂಸ್ಕರಣೆ ಎಂಬ ಎರಡು ಕೋರ್ಸ್‌ಗಳನ್ನು ಆರಂಭಿಸಲಾಗಿದೆ~ ಎಂದು ಮಾಹಿತಿ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಬಿ. ಮಲ್ಲಿಕ್, ದೂರ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ.ನಾರಾಯಣಸ್ವಾಮಿ, ಕೃಷಿ ವಿಸ್ತರಣಾ ನಿರ್ದೇಶಕ ಆರ್.ಎಸ್.ಕುಲಕರ್ಣಿ, ಪ್ರಭಾರ ಸಂಶೋಧನಾ ನಿರ್ದೇಶಕ ಡಾ.ಅರುಣ್ ಕುಮಾರ್, ಪ್ರಾಧ್ಯಾಪಕ ಡಾ.ಕೆ.ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.