ಬೆಂಗಳೂರು: ದೃಷ್ಟಿಮಾಂದ್ಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಎಂಟು ಲಕ್ಷ ರೂಪಾಯಿ ಹಣ ಕಾಯ್ದಿರಿಸುವುದು ಸೇರಿದಂತೆ ಬೆಂಗಳೂರು ವಿಶ್ವವಿದ್ಯಾಲಯವು ಗುರುವಾರ ಕರೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಈ ಬಾರಿಯ ಆಯವ್ಯಯಕ್ಕೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ.
ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ವಿವಿಯ ಚಟುವಟಿಕೆಗಳನ್ನು ಹೊಸ ಆಯಾಮಗಳಲ್ಲಿ ನಡೆಸಲು ಚಿಂತಿಸಲಾಗಿದೆ ಹಾಗೂ 2012-13ನೇ ಸಾಲಿನಲ್ಲಿ ವಿವಿಯಲ್ಲಿ ಕುಂದು ಕೊರತೆ ಘಟಕ, ಮಾಹಿತಿ ಕೇಂದ್ರ, ಪರೀಕ್ಷಾ ಕೆಲಸದ ಗಣಕೀಕರಣ, ಸ್ಮಾರ್ಟ್ ಕಾರ್ಡ್ ಹಾಗೂ ಈಗಿರುವ ವ್ಯವಸ್ಥೆಯ ಪುನಶ್ಚೇತನಕ್ಕಾಗಿ 8.5 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಈ ಬಾರಿಯ ಬಜೆಟ್ನಲ್ಲಿ ಯುವಜನ ಮತ್ತು ಸೇವಾ ಇಲಾಖೆಯ ಕಾರ್ಯಕ್ರಮದಲ್ಲಿ ಸೇವಾಧನ ಅಪೇಕ್ಷಿಸಿ, ಕ್ರೀಡಾಪಟುಗಳಿಗಾಗಿ ಹಾಸ್ಟೆಲ್, ಮಲ್ಟಿ ಜಿಮ್, ಕಟ್ಟಡ ನಿರ್ಮಾಣ, ಕ್ರೀಡಾ ತರಬೇತಿ ಮತ್ತು ಇತರೆ ವ್ಯವಸ್ಥೆಗಾಗಿ ರೂ 5 ಕೋಟಿ ಯನ್ನು ಸರ್ಕಾರದಿಂದ ಅಪೇಕ್ಷಿಸಿರುವುದಾಗಿ ವಿವಿಯ ಆಡಳಿತ ವರ್ಗ ಹೇಳಿದೆ.
ರಾಮನಗರ ಪಿ.ಜಿ ಕೇಂದ್ರ ನಿರ್ಮಾಣ ಮಾಡಲು ರೂ 50 ಲಕ್ಷ ಕಾಯ್ದಿರಿಸಲಾಗಿದ್ದು, ಸ್ಥಳ ಪರಿಶೀಲನೆಗೆ ಈಗಾಗಲೇ ಸಿ.ಕೆ.ಜಗದೀಶ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.