ADVERTISEMENT

ನಗರದಲ್ಲಿ ಗ್ರಾಮೀಣ ಕುಟುಂಬದ ಮಾದರಿ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಗ್ರಾಮೀಣ ಕುಟುಂಬ ಉತ್ಸವದಲ್ಲಿ ಸಿರಿಧಾನ್ಯ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಗ್ರಾಹಕರು –ಪ್ರಜಾವಾಣಿ ಚಿತ್ರ
ಗ್ರಾಮೀಣ ಕುಟುಂಬ ಉತ್ಸವದಲ್ಲಿ ಸಿರಿಧಾನ್ಯ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಗ್ರಾಹಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನೈಸರ್ಗಿಕ ಸಕ್ಕರೆಯಿಂದ ತಯಾರಿಸಿದ ತಿಂಡಿ ತಿನಿಸುಗಳು, ಎಲೆಗಳಿಂದ ಸಿದ್ಧವಾದ ಸಕ್ಕರೆ, ಬೆಲ್ಲದ ಕಾಫಿ ಹಾಗೂ ಕಷಾಯ.... ಇವು ಗ್ರಾಮೀಣ ಕುಟುಂಬ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.

ಮಧುಮೇಹಿಗಳನ್ನೇ ಕೇಂದ್ರೀಕರಿಸಿಕೊಂಡಿದ್ದ ಬಹುತೇಕ ಮಳಿಗೆಗಳು ಉತ್ಸವದಲ್ಲಿ ಕಂಡುಬಂದವು. ಲೋವ್‌ಕಲ್‌, ಡಯಾಬ್ಲಿಸ್‌, ಸ್ಟೀವಿಯಾ ಉತ್ಪನ್ನಗಳ ಸಕ್ಕರೆ ಕೊಂಡುಕೊಳ್ಳಲು ಜನರು ಮುತ್ತಿಕೊಂಡಿದ್ದರು.

ಕೆಲವು ಪದಾರ್ಥಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸಿದರು. ‘ಆರೋಗ್ಯಕ್ಕೆ ಇಷ್ಟೊಂದು ಹಣ ಕೊಡಬೇಕಾ’ ಎಂದು ಗೊಣಗಿದ ಒಂದು ಗುಂಪು, ಹಲಸಿನ ಕಾಯಿ ಚಿಪ್ಸ್ ಮೇಲಿನ ಬೆಲೆಯನ್ನು ಕೇಳಿ ಮುಂದೆ ಹೋಯಿತು.

ADVERTISEMENT

ಬೆಂಗಳೂರಿಗರ ಅವಸರದ ಜೀವನಶೈಲಿಯನ್ನು ಅರಿತುಕೊಂಡಂತೆ ಕಂಡ ಮಳಿಗೆಗಳ ಮಾಲೀಕರು, ರೆಡಿಮೇಡ್‌ ‘ಮಿಕ್ಸ್‌’ ಗಳನ್ನು ಪ್ರಮುಖವಾಗಿ ಮಾರಾಟ ಮಾಡುತ್ತಿದ್ದರು. ಇದರಲ್ಲಿ ದೋಸೆ ಮಿಕ್ಸ್‌, ಇಡ್ಲಿ ಮಿಕ್ಸ್‌, ಚಟ್ನಿ ಪುಡಿ, ಪುಳಿಯೋಗರೆ ಪುಡಿ, ಬಿಸಿ ಬೇಳೆ ಬಾತ್‌ ಪುಡಿ... ಹೀಗೆ ಪಟ್ಟಿ ದೊಡ್ಡದಾಗಿ ಬೆಳೆದಿತ್ತು. ಇದರಲ್ಲಿ ಈರುಳ್ಳಿ ಅಕ್ಕಿರೊಟ್ಟಿ, ಪಕೋಡ, ಉಂಡೆ ಮಿಕ್ಸ್‌ಗಳು ಕೂಡ ಇದ್ದದ್ದು ಗಮನ ಸೆಳೆಯಿತು. ‘ನೀರಿನೊಂದಿಗೆ ಕಲಸಿ ನೇರವಾಗಿ ಹಂಚು ಅಥವಾ ಬಾಣಲಿಗೆ ಹಾಕಿದರೆ ಸಾಕು’ ಎನ್ನುವ ಒಕ್ಕಣೆಯನ್ನು ಕೂಡ ಅಲ್ಲಿ ಪ್ರದರ್ಶಿಸಲಾಗಿತ್ತು.

ಮಧುಮೇಹಿಗಳನ್ನೇ ಕೇಂದ್ರೀಕರಿಸಿಕೊಂಡಿದ್ದ ಬಹುತೇಕ ಮಳಿಗೆಗಳು ಉತ್ಸವದಲ್ಲಿ ಮಧುಮೇಹಿಗಳನ್ನೇ ಕೇಂದ್ರೀಕರಿಸಿಕೊಂಡಿದ್ದ ಬಹುತೇಕ ಮಳಿಗೆಗಳು ಉತ್ಸವದಲ್ಲಿ ಸಿರಿಧಾನ್ಯಗಳ ಪದಾರ್ಥಗಳಿಗೆ ಬೇಡಿಕೆ: ನವಣೆ, ಸಾಮೆ, ಆರ್ಕಾ, ಕೊರಲು, ಬರಗು ಸೇರಿದಂತೆ ಸಿರಿಧಾನ್ಯಗಳಿಂದ ತಯಾರಾದ ಪದಾರ್ಥಗಳಿಗೆ ಮೇಳದಲ್ಲಿ ಹೆಚ್ಚು ಬೇಡಿಕೆ ಇತ್ತು.

ರಾಗಿ, ಜೋಳ, ಸಜ್ಜೆಯ ಅವಲಕ್ಕಿ, ಮಿಲ್ಲೆಟ್‌ ಲಡ್ಡು, ಕೋಡುಬಳೆ ಸೇರಿದಂತೆ ನೈಸರ್ಗಿಕ ಅರಿಶಿಣ ಪುಡಿ, ಕಂದು ಅಲಸಂದೆ, ಹಸುವಿನ ತುಪ್ಪ, ಜೇನುತುಪ್ಪದ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು. ಸೌಂದರ್ಯವರ್ಧಕಗಳು, ಮಕ್ಕಳಿಗೆ ಇಷ್ಟವಾಗುವ ರುಚಿಕರ ಹಾಲಿನ ಪೌಡರ್‌, ಕಾಟನ್‌ ಬಟ್ಟೆಗಳು, ಕರಿದ ತಿಂಡಿಗಳನ್ನು ತಿನ್ನಲು ಹಿಂದೇಟು ಹಾಕುವವರಿಗಾಗಿ ನೈಸರ್ಗಿಕ ತೈಲಗಳು, ವಿವಿಧ ಜ್ಯೂಸ್‌ಗಳು ಇಲ್ಲಿನ ಕೇಂದ್ರ
ಬಿಂದುಗಳಾಗಿದ್ದವು.

ಸಮತೋಲನ ಜೀವನ ಶೈಲಿಗೆ ಬೇಕು ಸಿರಿ ಧಾನ್ಯ:ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ‘ಸಮತೋಲನ ಜೀವನಶೈಲಿ ಹಾಗೂ ಕ್ರಮಬದ್ಧ ಆಹಾರಪದ್ಧತಿಗೆ ಸಿರಿಧಾನ್ಯ ಬಳಕೆ ಉತ್ತಮ ಮಾರ್ಗ’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಲಾಲ್‌ಬಾಗ್‌ನಲ್ಲಿ ಶುಕ್ರವಾರ, ‘ಗ್ರಾಮೀಣ ಕುಟುಂಬ ಉತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿರಿಧಾನ್ಯಗಳನ್ನು ಬಳಸುವುದರಿಂದ ಜೀವನಶೈಲಿಗೆ ಸಂಬಂಧಿಸಿದ ರೋಗಗಳು ಬರುವುದು ಕಡಿಮೆ. ಆರೋಗ್ಯವಂತ ಹಾಗೂ ಪ್ರಜ್ಞಾವಂತ ಆಹಾರ ಪರಿಚಯ ಇಲ್ಲಿದೆ’ ಎಂದು ಅವರು ಹೇಳಿದರು.

‘ಸಿರಿಧಾನ್ಯ ಸೇವನೆಯಿಂದ ಅನಾರೋಗ್ಯದ ಪ್ರಮಾಣ ಕಡಿಮೆಯಾಗಲಿದೆ. ಸೂಕ್ಷ್ಮ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ’ ಎಂದು ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಹೇಳಿದರು.

ಪುರಸ್ಕಾರ: ‘2018 ಗ್ರಾಮೀಣ ಕುಟುಂಬ ಪ್ರಶಸ್ತಿ’ಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ನೈಸರ್ಗಿಕ ಕೃಷಿ ಮಾಡಿದ ಒಂಬತ್ತು ಸಾಧಕರಾದ ಡಾ.ಜಗದೀಶ್‌, ಬಿ.ಆರ್‌.ಜಯಂತ್‌ನಾಥ್‌, ರೇಚಣ್ಣ, ದರೆಪ್ಪ ಪರೆಪ್ಪಾ ಕಿತ್ತೂರು, ಹೊನ್ನೂರು ಪ್ರಕಾಶ್‌, ವೀರನಾರಾಯಣ ಕುಲಕರ್ಣಿ, ಮೀನಾಕ್ಷಮ್ಮ, ಎಂ.ಕೆ ಗಿರೀಶ್ ಕುಮಾರ್‌, ಸೀತಾರಾಮ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.