ADVERTISEMENT

ನಗರ: ಇಂದು, ನಾಳೆ ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 19:55 IST
Last Updated 9 ಮಾರ್ಚ್ 2011, 19:55 IST

 ಬೆಂಗಳೂರು: ಕಾವೇರಿ 4ನೇ ಹಂತ, 2ನೇ ಘಟ್ಟದಲ್ಲಿ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಲ್ಲಿ ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೆ ಕುಡಿಯುವ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

 ಕೇಂದ್ರ, ಪೂರ್ವ ಮತ್ತು ಉತ್ತರ ಭಾಗದಲ್ಲಿನ ಪ್ರದೇಶಗಳಿಗೆ ಎರಡು ದಿನಗಳ ಕಾಲ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೇ ನಗರದ ಉಳಿದ ಪ್ರದೇಶಗಳಲ್ಲೂ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ನಿತ್ಯ ಕಾವೇರಿ ನದಿಯಿಂದ 500 ದಶಲಕ್ಷ ಲೀಟರ್ ನೀರು ತರುವ ಸಲುವಾಗಿ ಕೊಳವೆಗಳನ್ನು ಅಳವಡಿಸಲಾಗುತ್ತಿದೆ.

  ತೊರೆಕಾಡನಹಳ್ಳಿಯಲ್ಲಿ 48 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಿಸಲಾಗುತ್ತಿದ್ದು, ಇದೇ ಜಾಗದಲ್ಲಿ ಕಾವೇರಿ 2 ಮತ್ತು 3ನೇ ಹಂತದ ಕೊಳವೆ ಮಾರ್ಗಗಳು ಹಾದು ಹೋಗಿವೆ. ಹಾಗಾಗಿ ಈ ಕೊಳವೆ ಮಾರ್ಗಗಳನ್ನು ಬೇರೆಡೆಗೆ ವರ್ಗಾಯಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಆ ಹಿನ್ನೆಲೆಯಲ್ಲಿ ಕಾವೇರಿ 2 ಮತ್ತು 3ನೇ ಹಂತದ ನೀರಿನ ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.