
ಬೆಂಗಳೂರು: `ಹೃದಯದಿಂದ, ನಿರ್ಮಲವಾಗಿ ಬರುವ ನಗು ಮನುಷ್ಯನ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ' ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.
`ಯಶಸ್ವಿ ಕಲಾವಿದರ' ತಂಡವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಏರ್ಪಡಿಸಿದ್ದ `ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಹಾಸ್ಯ ಪ್ರಜ್ಞೆ ಮತ್ತು ನಗು ಎಲ್ಲರಲ್ಲಿಯೂ ಬೇಕು. ನಗು ಎಲ್ಲ ಕಾಯಿಲೆಗಳಿಗೆ ದಿವ್ಯ ಔಷಧಿಯಾಗಿದೆ. ಆದರೆ, ಇಂದಿನವರು ಹೆಚ್ಚು ನಗುವುದೇ ಇಲ್ಲ. ವ್ಯಸನದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದು ಬಿಡುತ್ತಾರೆ' ಎಂದು ಹೇಳಿದರು.
`ಸಿನಿಮಾ ಆರಂಭವಾದಾಗಿನಿಂದ ನಾಟಕಗಳು ಕಡಿಮೆಯಾಗಿವೆ ಎಂಬ ಆರೋಪವಿದೆ. ಆದರೆ, ಕೆಲವು ಹಾಸ್ಯ ಮತ್ತು ಸಾಮಾಜಿಕ ನಾಟಕಗಳು ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿವೆ' ಎಂದರು.
ಹಿರಿಯ ನಟಿ ಜಯಂತಿ ಮಾತನಾಡಿ, `ನಮ್ಮಲ್ಲಿನ ಎಲ್ಲ ಕಷ್ಟಗಳನ್ನು ಮರೆತು ಮನದುಂಬಿ ನಕ್ಕು ಬಿಡಬೇಕು. ಆಗ, ಮನಸ್ಸಿನ ಭಾರವೆಲ್ಲ ಕಡಿಮೆಯಾಗಿ ಬದುಕು ಹಸನಾಗುತ್ತದೆ' ಎಂದು ಹೇಳಿದರು.`ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕದ 1297 ನೇ ಯಶಸ್ವಿ ಪ್ರದರ್ಶನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.