ADVERTISEMENT

`ನದಿ ಪುನಃಶ್ಚೇತನಕ್ಕೆ ಬದ್ಧತೆಯ ಸೇವೆ'

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 20:08 IST
Last Updated 3 ಜುಲೈ 2013, 20:08 IST

ನೆಲಮಂಗಲ: `ಆರ್ಕಾವತಿ ಮತ್ತು ಕುಮುದ್ವತಿ ನದಿ ಪಾತ್ರದ ಜನರ ನಿರ್ಲಕ್ಷದಿಂದ ನದಿಗಳು ಬತ್ತಿಹೋಗಿವೆ. ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕರು ಮತ್ತು ಯುವಕರು ಬದ್ಧತೆಯಿಂದ ಕೆಲಸ ಮಾಡಿದರೆ ನದಿ ಪುನಶ್ವೇತನ ಸಾಧ್ಯ' ಎಂದು ಸಮಿತಿಯ ತಜ್ಞ ಡಾ.ಎಲೆ ಲಿಂಗರಾಜು ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಯಂಟಗಾನಹಳ್ಳಿ ಗ್ರಾಮದಲ್ಲಿ  ಆರ್ಟ್ ಆಫ್ ಲಿವಿಂಗ್‌ನ ಸ್ವಯಂಸೇವಕರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ಗ್ರಾಮದ ಕಲ್ಯಾಣಿಗಳನ್ನು ಶುಚಿಗೊಳಿಸುವ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.

`ನದಿ ದಂಡೆಯಲ್ಲಿ ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಯುತ್ತಿದೆ' ಎಂದು ವಿಷಾದಿಸಿದ ಅವರು, ದಡದ ಎರಡು ಭಾಗದಲ್ಲಿ ಗಿಡ ನೆಟ್ಟು ಹಸಿರು ಬೆಳೆಸಲು ತಿಳಿಸಿದರು.

ಶ್ರೀನಿವಾಸ ರೆಡ್ಡಿ,ರವೂರ್ ನಿಜಲಿಂಗಪ್ಪ, ರಾಜಶೇಖರ್ ರೆಡ್ಡಿ ಮುಂತಾದವರು ವೇದಿಕೆಯಲ್ಲಿದ್ದರು.

  ಅಂತರ್ಜಲ ನಿರ್ವಹಣೆ, ನದಿ ಸುತ್ತಮುತ್ತ ಕೈಗಾರಿಕೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು. ಯೋಜನಾಧಿಕಾರಿ ಬಿ.ಮಧೂಸೂಧನ್, ಹಸಿರು ಪಡೆಯ ಅಧಿಕಾರಿ ಜಿ.ಬಿ.ವೆಂಕಟೇಶ್ ಕಾರ್ಯಕ್ರಮ ಆಯೋಜಿಸಿದ್ದರು.  ಇದೇ ಸಂದರ್ಭದಲ್ಲಿ ಲೇಖಕ ತ್ಯಾಮಗೊಂಡ್ಲು ಅಂಬರೀಷ್ ಅವರಿಂದ ಇಂಗ್ಲೀಷ್ ಭಾಷೆಯ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಗೂಬೆ ಕಲ್ಲಮ್ಮ ದೇವಸ್ಥಾನ ಪ್ರತಿಷ್ಠಾಪನೆ (ಮತ್ತೊಂದು ವರದಿ): ಇಲ್ಲಿಗೆ ಸಮೀಪದ ಕುಣಿಗಲ್ ಮುಖ್ಯ ರಸ್ತೆಯ ಟೋಲ್ ಬಳಿ ಗೂಬೆ ಕಲ್ಲಮ್ಮ ದೇವಿಯ ನೂತನ ಪ್ರತಿಷ್ಠಾಪನ ಮಹೋತ್ಸವದ ಧರ್ಮಸಭೆ ಈಚೆಗೆ ನಡೆಯಿತು.

ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ, ಓಂಕಾರಾಶ್ರಮದ ಮಧುಸೂಧಾನಂದ ಪುರಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೀರ್ಣೋದ್ಧಾರ ಟ್ರಸ್ಟ್‌ನ ಅಧ್ಯಕ್ಷ ಜಿ.ಜಯರಾಮಯ್ಯ, ಶಾಸಕ ಡಾ.ಶ್ರೀನಿವಾಸ ಮೂರ್ತಿ, ಮಾಜಿ ಶಾಸಕ ಎಂ.ವಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.