ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಸೋಮವಾರ ಬೆಳಿಗ್ಗೆ ಪ್ರಯಾಣಿಕರ ದಟ್ಟಣೆ ದಿಢೀರ್ ಹೆಚ್ಚಳವಾಯಿತು. ಪ್ರಯಾಣಿಕರಿಂದ ಬೇಡಿಕೆ ಬಂದಿದ್ದರಿಂದ ಬೆಂಗಳೂರು ಮೆಟ್ರೊ ರೈಲು ನಿಗಮವು ಹಸಿರು ಹಾಗೂ ನೇರಳೆ ಮಾರ್ಗಗಳೆರಡರಲ್ಲೂ ತಲಾ 12 ಹೆಚ್ಚುವರಿ ಟ್ರಿಪ್ಗಳ ವ್ಯವಸ್ಥೆ ಕಲ್ಪಿಸಿತು.
ದೀಪಾವಳಿ ಪ್ರಯುಕ್ತ ಊರಿಗೆ ತೆರಳಿದ್ದವರು ಹಬ್ಬದ ರಜೆ ಮುಗಿಸಿ ಸೋಮವಾರ ನಗರಕ್ಕೆ ಮರಳಿದ್ದರು. ಇದರಿಂದಾಗಿ ನಾಗಸಂದ್ರ, ಪೀಣ್ಯ, ಯಶವಂತಪುರ ಪ್ರದೇಶಗಳಲ್ಲಿ ಬೆಳಗಿನ ಜಾವ ವಾಹನ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಅನೇಕರು ನಾಗಸಂದ್ರ, ಪೀಣ್ಯ ಹಾಗೂ ಯಶವಂತಪುರ ನಿಲ್ದಾಣಗಳ ಬಳಿ ಬಸ್ಸಿನಿಂದ ಇಳಿದು ಮೆಟ್ರೊ ಮೂಲಕ ಪ್ರಯಾಣಿಸಿದರು. ಇದರಿಂದಾಗಿಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕಿದವು.
‘ಸಾಮಾನ್ಯವಾಗಿ ನಾವು ಪೂರ್ವ– ಪಶ್ಚಿಮ ಕಾರಿಡಾರ್ನಲ್ಲಿ (ನೇರಳೆ ಮಾರ್ಗ) ಮಾತ್ರ ಶಾರ್ಟ್ ಲೂಪ್ ಟ್ರಿಪ್ ವ್ಯವಸ್ಥೆ ಕಲ್ಪಿಸುತ್ತಿದ್ದೆವು. ಉತ್ತರ –ದಕ್ಷಿಣ ಮಾರ್ಗದಲ್ಲಿ ಯಶವಂತಪುರ– ಜಯನಗರ ನಿಲ್ದಾಣಗಳ ನಡುವೆಯೂ ಸೋಮವಾರ ಶಾರ್ಟ್ ಲೂಪ್ ಟ್ರಿಪ್ಗಳ ವ್ಯವಸ್ಥೆ ಕಲ್ಪಿಸಿದೆವು’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
‘ರಾತ್ರಿ 10 ಗಂಟೆವರೆಗೆ ನೇರಳೆ ಮಾರ್ಗದಲ್ಲಿ 2.07 ಲಕ್ಷ ಹಾಗೂ ಹಸಿರು ಮಾರ್ಗದಲ್ಲಿ 1.63 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸಿದ್ದಾರೆ’ ಎಂದು ಅವರು ತಿಳಿಸಿದರು.
**
ನೇರಳೆ ಮಾರ್ಗದಲ್ಲಿ ಹಸಿರು ರೈಲು
ಹಸಿರು ಮಾರ್ಗದ ಎರಡು ರೈಲುಗಳು ನೇರಳೆ ಮಾರ್ಗದಲ್ಲಿ ಪ್ರಯಾಣಿಸಿದವು. ಇದರಿಂದಾಗಿ ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಗಲಿಬಿಲಿಗೊಳಗಾದರು.
‘ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಹಸಿರು ಮಾರ್ಗದಲ್ಲಿ ಓಡಿಸುವ ಎರಡು ರೈಲುಗಳನ್ನು ನೇರಳೆ ಮಾರ್ಗದಲ್ಲಿ ಓಡಿಸಿದ್ದೇವೆ. ಈ ಮಾರ್ಗದಲ್ಲಿ ಒಟ್ಟು 22 ಹಾಗೂ ಹಸಿರು ಮಾರ್ಗದಲ್ಲಿ 18 ರೈಲುಗಳು ಸಂಚರಿಸುತ್ತಿವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.