ಕೆಂಗೇರಿ: ನಾಡಿನ ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಶಾಂತಿಧಾಮ ಶಾಲೆಯ ಉಪಾಧ್ಯಕ್ಷ ಧನಂಜಯ ಕರೆ ನೀಡಿದರು.ನಗರದ ಮಾಗಡಿ ರಸ್ತೆಯ ಶಾಂತಿಧಾಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ‘ಸಂಜೆ ಸಂಭ್ರಮ- 2011’ದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಯಾಗಿರುವಾಗ ಕಲಿತದ್ದು ಜೀವನದುದ್ದಕ್ಕೂ ಕೈ ಹಿಡಿದು ನಡೆಸುತ್ತದೆ. ವ್ಯಕ್ತಿಗತ ಬೆಳವಣಿಗೆಯ ಜತೆ ಜತೆಗೆ ಹುಟ್ಟಿ ಬೆಳೆದ ನಾಡಿನ ಏಳಿಗೆಗಾಗಿಯೂ ದುಡಿಯಬೇಕು’ ಎಂದು ಅವರು ಕರೆ ನೀಡಿದರು.ಶಾಲೆಯ ಅಧ್ಯಕ್ಷ ಗಂಗಾಧರಯ್ಯ, ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಮೊದಲಾದವರು ಹಾಜರಿದ್ದರು.
ಡೊಳ್ಳು, ಪೂಜಾ, ವೀರಗಾಸೆ, ಬುಡಬುಡಿಕೆ, ಕೋಲಾಟ, ಭರತ ನಾಟ್ಯ, ಯಕ್ಷಗಾನ, ಕರಗ- ಹೀಗೆ ವಿವಿಧ ಜಾನಪದ ಸಂಸ್ಕೃತಿ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ರಂಜಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.