ಬೆಂಗಳೂರು: ‘ಕುತೂಹಲಗಳ ಜತೆಯಲ್ಲಿ ನಿರೂಪಣಾ ಶೈಲಿಯಿಂದಲೇ ಓದುಗನನ್ನು ಹಿಡಿದಿಡುವ ಶಕ್ತಿ ‘ಪ್ರಸ್ಥಾನ’ ಕಾದಂಬರಿಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ತಿಳಿಸಿದರು.
ಸಿವಿಜಿ ಇಂಡಿಯಾ ಸಂಸ್ಥೆಯು ಉದಯಭಾನು ಕಲಾಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸುರೇಶ ಪಾಟೀಲರ ‘ಪ್ರಸ್ಥಾನ’ ಕಾದಂಬರಿಬಿಡುಗಡೆ ಮಾಡಿ ಮಾತನಾಡಿದರು.
‘ನವೋದಯ, ನವ್ಯ ಹಾಗೂ ನವ್ಯೋತ್ತರ ಸೇರಿದಂತೆ ಎಲ್ಲ ಪರಂಪರೆಗಳಿಗೂ ದಕ್ಕುವ ಶ್ರೇಷ್ಠ ಕೃತಿ ಇದಾಗಿದ್ದು, ವಿಮರ್ಶಾ ವಲಯದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಬೇಕು’ ಎಂದು ಹೇಳಿದರು.
‘ಸಾಹಿತ್ಯ ಅರಿವಿನ ವಿಸ್ತಾರವನ್ನು ಹೆಚ್ಚಿಸಬೇಕೆ ಅಥವಾ ಮನೋರಂಜನೆ ವಸ್ತುವಾಗಬೇಕೆ ಎಂಬುದು ಇಂದಿಗೂ ಚರ್ಚಿತ ವಿಷಯವೇ. ಆದರೆ ಮನೋರಂಜನೆಯ ಧಾಟಿಯನ್ನು ಬಳಸದೇ, ರೋಚಕ ಶೈಲಿ ಅನುಸರಿಸದೇ ಕುತೂಹಲ ಮೂಡಿಸುವ ಕಥನ ಶೈಲಿಗೆ ಬೆರಗಾಗಿದ್ದೇನೆ’ ಎಂದು ಶ್ಲಾಘಿಸಿದರು.
‘ವೈದ್ಯಕೀಯ ಹಾಗೂ ಮಾಧ್ಯಮ ಕ್ಷೇತ್ರಗಳ ಧಾವಂತಗಳ ಮಧ್ಯೆ ಆದರ್ಶವನ್ನೇ ಹೊತ್ತಕೊಂಡ ನಾಯಕನ ಕಥಾವಸ್ತು ಪ್ರಸ್ತುತ ಸಮಾಜವನ್ನು ನೈಜವಾಗಿ ಬಿಂಬಿಸುವಲ್ಲಿ ಯಶ್ವಸಿಯಾಗಿದೆ’ ಎಂದರು.
ಕತೆಗಾರ ಡಾ.ಕೆ.ಸತ್ಯನಾರಾಯಣ, ‘ಸುರೇಶ ಅವರು ಸಂಬಂಧಗಳ ಸಂಕೀರ್ಣತೆ ಹಾಗೂ ಆದರ್ಶಗಳ ಜಟಿಲತೆಯನ್ನು ನವಿರಾದ ಕಥಾ ವಿನ್ಯಾಸದ ಮೂಲಕ ಸೆರೆಹಿಡಿದಿದ್ದಾರೆ’ ಎಂದರು.
ಚಿಂತಕ ಡಾ.ಬೈರಮಂಗಲ ರಾಮೇಗೌಡ, ‘ಸಾಹಿತ್ಯ ಕ್ಷೇತ್ರದಲ್ಲಿ ಜಾತಿ ಹಾಗೂ ಗುಂಪುಗಾರಿಕೆ ಹೆಚ್ಚಾಗಿರುವುದರಿಂದ ಯೋಗ್ಯ ಕೃತಿಗಳ ಬಗ್ಗೆ ಸಮರ್ಪಕ ವಿಮರ್ಶೆ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.