ADVERTISEMENT

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:37 IST
Last Updated 16 ಫೆಬ್ರುವರಿ 2013, 19:37 IST
ದೊಡ್ಡಮುನಿಯಪ್ಪ
ದೊಡ್ಡಮುನಿಯಪ್ಪ   

ದೇವನಹಳ್ಳಿ: ಇಲ್ಲಿನ ಐ.ಟಿ.ಸಿ ಫಿಲ್ಟ್ರೋನ್ ಕಾರ್ಖಾನೆಯ ಮೇಲ್ವಿಚಾರಕರ ಶವ ಶನಿವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗ್ದ್ದಿದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲ ವ್ಯಕ್ತವಾಗಿದೆ.

ಕಾರ್ಖಾನೆಯ ಒಂದನೇ ಮಹಡಿಯಲ್ಲಿನ ಜಿಮ್ನಾಸ್ಟಿಕ್ ಕೊಠಡಿಯಲ್ಲಿ ಸಂಜೆ 4.45ರ ವೇಳೆಯಲ್ಲಿ ಮೃತದೇಹ ಕಂಡು ಬಂದಿದೆ. ಶವದ ಬಳಿ ರಕ್ತದ ಹನಿಗಳು ಕಂಡು ಬಂದಿದ್ದು ಇದು ಕೊಲೆ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಆರೋಪಿಸಲಾಗಿದೆ. ಮೃತ ವ್ಯಕ್ತಿಯನ್ನು ಯರ್ತಿಗಾನಹಳ್ಳಿ ಗ್ರಾಮದ ದೊಡ್ಡಮುನಿಯಪ್ಪ (50) ಎಂದು ಗುರುತಿಸಲಾಗಿದೆ. ಇವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.

`ಕಾರ್ಖಾನೆ ಆರಂಭದಿಂದಲೂ ಇವರು ಇಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ನಂತರ ಮೇಲ್ವಿಚಾರಕರಾಗಿ ಬಡ್ತಿ ಪಡೆದಿದ್ದರು. ಕಾರ್ಮಿಕರ ಸಮಸ್ಯೆಗಳಿಗೆ ಕಾಳಜಿಯಿಂದ ಸ್ಪಂದಿಸುತ್ತಿದ್ದರು. ಎರಡು ವರ್ಷದಿಂದ ಫಿಲ್ಟ್ರೋನ್ ಕಂಪೆನಿಯು ಎಸ್.ಆರ್.ಎಸ್ ಎಂಬ ಮತ್ತೊಂದು ಖಾಸಗಿ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು. ಆಗಿನಿಂದಲೂ ಅವರು ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು' ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವ್ಯವಸ್ಥಿತ ಕೊಲೆ- ಪತ್ನಿ ಆರೋಪ: `ನನ್ನ ಗಂಡ ಮೃದು ಸ್ವಭಾವದವರಾಗಿದ್ದರು. ಜೀವನದಲ್ಲಿ ಯಾರೊಂದಿಗೂ ಕೆಟ್ಟ ಮಾತನಾಡಿದವರಲ್ಲ. ಎಲ್ಲರಿಗೂ ಆತ್ಮೀಯರಾಗಿದ್ದರು. ಆದರೆ ಕಾರ್ಖಾನೆಯಲ್ಲಿನ ನೌಕರ ಅಶೋಕ ಎಂಬುವವರ ಬಗ್ಗೆ ಅಗಿಂದಾಗ್ಗೆ ನನ್ನ ಬಳಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸುತ್ತಿದ್ದರು.

ಅವರ ಮೇಲೆ ನನಗೆ ಅನುಮಾನವಿದೆ. ಇದೊಂದು ವ್ಯವಸ್ಥಿತ ಸಂಚು. ಕೂಡಲೇ ಪೊಲೀಸರು ಅವರನ್ನು ಕರೆಯಿಸಿ ವಿಚಾರಣೆ ನಡೆಸುವವರೆಗೂ ಮೃತದೇಹವನ್ನು ಸ್ವಾಧೀನಕ್ಕೆ ಪಡೆಯುವುದಿಲ್ಲ' ಎಂದು ಪಟ್ಟು ಹಿಡಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜ್, ಸಬ್ ಇನ್‌ಸ್ಪೆಕ್ಟರ್ ರಾಜೇಶ್ ಗುಟಗುರ್ಕಿ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT