ADVERTISEMENT

ನ್ಯಾಯಕ್ಕಾಗಿ ಪೋಷಕರ ಮನವಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST
ನ್ಯಾಯಕ್ಕಾಗಿ ಪೋಷಕರ ಮನವಿ
ನ್ಯಾಯಕ್ಕಾಗಿ ಪೋಷಕರ ಮನವಿ   

ಬೆಂಗಳೂರು: ಗಂಗಾನಗರದ ಪಶು ವೈದ್ಯಕೀಯ ಕಾಲೇಜಿನ ತಡೆಗೋಡೆ ಬಿದ್ದು ಸಂಜನಾ ಸಿಂಗ್ (17) ಮರಣ ಹೊಂದಿ ಈಗಾಗಲೇ ಎರಡು ವರ್ಷಗಳು ಕಳೆದಿವೆ. ಮಗಳನ್ನು ಬಲಿ ತೆಗೆದುಕೊಂಡ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಸಂಜನಾಳ ಪೋಷಕರು ನ್ಯಾಯಕ್ಕಾಗಿ ಇನ್ನೂ ಅಂಗಲಾಚುತ್ತಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ನಡೆಸಿ, ಘಟನೆಯ ಸಂಪೂರ್ಣ ವರದಿಯನ್ನು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಮಾತನಾಡಿ, `ಲೋಕಾಯುಕ್ತ ವರದಿಯಲ್ಲಿ ಗುತ್ತಿಗೆದಾರ ಮತ್ತು  ಎಂಜಿನಿಯರ್‌ಗಳು ಆರೋಪಿಗಳೆಂದು ನೀಡಿದ್ದರೂ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ, ಅಮಾನವೀಯತೆಯನ್ನು ಮೆರೆಯುತ್ತಿದೆ~ ಎಂದರು.

`ವರದಿಯಲ್ಲಿ ತಿಳಿಸಿರುವ ಆರೋಪಿಗಳಲ್ಲಿ ಗುತ್ತಿಗೆದಾರರಿಗೆ ಮೊದಲು ಶಿಕ್ಷೆಯಾಗಬೇಕು, ಏಕೆಂದರೆ ಅವರು, ಗೋಡೆಯನ್ನು ಕಟ್ಟಲು ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸರಬರಾಜು ಮಾಡಿರಲಿಲ್ಲ. ಅತಿ ಕಡಿಮೆ ಗುಣಮಟ್ಟದ ಸಿಮೆಂಟಿನಿಂದ ಅವೈಜ್ಞಾನಿಕವಾಗಿ ಕಟ್ಟಿದ ಗೋಡೆಯು ಯಾವ ವೇಳೆಯಲ್ಲಾದರೂ, ಯಾರ ಮೇಲೆ ಬೇಕಾದರೂ ಬೀಳಬಹುದು. ಆದ್ದರಿಂದ ಗುತ್ತಿಗೆದಾರರ ನಿರ್ಲಕ್ಷ್ಯ ಘಟನೆಗೆ ಪ್ರಮುಖ ಕಾರಣ~ ಎಂದು ಹೇಳಿದರು.

`ಈಗ ಇದು ಬರೀ ಒಂದು ಅಪಘಾತವೆಂದು ಹೇಳಲಾಗುತ್ತಿದೆ. ಆದರೆ, ಇದು ಮನುಷ್ಯನ ತಪ್ಪಿನಿಂದ ನಡೆದ ಅಪಘಾತವಾಗಿದ್ದು, ಇದು ಕ್ಷಮೆಗೆ ಅನರ್ಹವಾಗಿದೆ. ಸಂಜನಾಳ ಕುಟುಂಬವು ಪ್ರಭಾವಕಾರಿಯಾಗಿಲ್ಲ ಆದ್ದರಿಂದ ಅವರಿಗೆ ನ್ಯಾಯ ದೊರೆಯುವುದು ವಿಳಂಬವಾಗುತ್ತಿದೆ~ ಎಂದರು.

ಗುತ್ತಿಗೆದಾರ ಮತ್ತು ಬಿಬಿಎಂಪಿ ಪಾಲಿಕೆ ಸದಸ್ಯ ಮುನಿರತ್ನ ನಾಯ್ಡು ಪ್ರಮುಖ ಆರೋಪಿಯೆಂದು ಹೇಳಲಾಗಿದ್ದರೂ ಅವನ ವಿರುದ್ಧ ಯಾವುದೇ ಕ್ರಮಗಳನ್ನು ಸರ್ಕಾರ ಇದುವರೆಗೂ ಕೈಗೊಂಡಿಲ್ಲ. ಜೂನ್ 1 ರಂದು ಸಂಜನಾಳ ಮೇಲೆ ಗೋಡೆ ಬಿದ್ದು ಅವಳು ಸ್ಥಳದಲ್ಲೇ ಮರಣ ಹೊಂದಿದ್ದಳು.ಲೋಕಾಯುಕ್ತವು ಬಿಬಿಎಂಪಿಗೆ ಮೂರು ತಿಂಗಳಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತನ್ನ ವರದಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.