ADVERTISEMENT

ನ್ಯಾಯದೇವತೆ ಎದುರೇ ವಿಷಕುಡಿದ ಬಡಪಾಯಿ!

ವರದಕ್ಷಿಣೆ ಕಿರುಕುಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:55 IST
Last Updated 8 ಏಪ್ರಿಲ್ 2013, 19:55 IST

ಬೆಂಗಳೂರು: ಪ್ರಕರಣವೊಂದರ ವಿಚಾರಣೆಗಾಗಿ ನಗರದ ನೃಪತುಂಗ ರಸ್ತೆಯಲ್ಲಿನ ಎಸಿಎಂಎಂ ನ್ಯಾಯಾಲಯಕ್ಕೆ ಬಂದಿದ್ದ ರಮೇಶ್ (29) ಎಂಬುವರು ನ್ಯಾಯಾಧೀಶರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಕುಮಾರಸ್ವಾಮಿಲೇಔಟ್ ನಿವಾಸಿಯಾದ ರಮೇಶ್, ಕೂಲಿ ಕೆಲಸ ಮಾಡುತ್ತಾರೆ. ಕೌಟುಂಬಿಕ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದಿದ್ದ ಅವರು ಐದನೇ ಸಂಚಾರ ನ್ಯಾಯಾಲಯದ (ಎಂಎಂಟಿಸಿ) ಕೊಠಡಿಯಲ್ಲಿ ನ್ಯಾಯಾಧೀಶರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವಕೀಲರು ಹಾಗೂ ಇತರೆ ಕಕ್ಷಿದಾರರು, ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಮೇಶ್ ಅವರ ಪತ್ನಿ ಶ್ಯಾಮಲಾ ಅವರು ಜೆ.ಪಿ.ನಗರ ಠಾಣೆಯಲ್ಲಿ 2011ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಕಾರಣಕ್ಕಾಗಿ ಪೊಲೀಸರು ರಮೇಶ್ ಮತ್ತು ಪೋಷಕರನ್ನುಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

`ಪತ್ನಿ ಶ್ಯಾಮಲಾ ಮತ್ತು ಆಕೆಯ ತಾಯಿ, ರೂ 3 ಲಕ್ಷ ಹಣ ಕೊಟ್ಟರೆ ದೂರು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದ್ದರು. ಹಣ ಕೊಡದಿದ್ದರೆ ದೂರು ಹಿಂಪಡೆಯುವುದಿಲ್ಲ ಎಂದು ಅವರು ಬೆದರಿಕೆ ಹಾಕುತ್ತಿದ್ದರು. ಅದೇ ರೀತಿ ಪತ್ನಿ ಪರ ವಕೀಲರು, ಪ್ರಕರಣದಲ್ಲಿ ನನಗೆ ಸೋಲಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೆದರಿಸುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದೆ' ಎಂದು ರಮೇಶ್ `ಪ್ರಜಾವಾಣಿ'ಗೆ ತಿಳಿಸಿದರು. ಘಟನೆ ಸಂಬಂಧ ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.