ಬೆಂಗಳೂರು: ರಾಜ್ಯ ಹೈಕೋರ್ಟ್ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ‘ಸಮರ್ಥ ಮತ್ತು ಸೂಕ್ತ ವಕೀಲರನ್ನು’ ನೇಮಕ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರನ್ನು ಒತ್ತಾಯಿಸಲು ರಾಜ್ಯ ವಕೀಲರ ಪರಿಷತ್ತು ಶನಿವಾರ ನಿರ್ಣಯ ಕೈಗೊಂಡಿದೆ.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರನ್ನು ಒತ್ತಾಯಿಸಲಾಗುವುದು. ವಕೀಲರ ಪರಿಷತ್ತಿನ ಅಧ್ಯಕ್ಷ ಸಿ.ಆರ್. ಗೋಪಾಲಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಹಿರಿಯ ವಕೀಲರ ಪರವಾಗಿ ಬಿ.ವಿ. ಆಚಾರ್ಯ ಮತ್ತು ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರಿಗೆ ನ್ಯಾ. ವಘೇಲಾ ಅವರನ್ನು ಭೇಟಿ ಮಾಡಿ, ಅವರಲ್ಲಿ ಈ ವಿಷಯ ಪ್ರಸ್ತಾಪಿಸುವ ಅಧಿಕಾರ ನೀಡಲಾಗಿದೆ ಎಂದು ನಿರ್ಣಯ-ದಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದ ನಂತರ ಗೋಪಾಲಸ್ವಾಮಿ ಅವರು ಈ ವಿಷಯ ತಿಳಿಸಿದರು.
‘ಈ ವರ್ಷದ ಆರಂಭದಲ್ಲಿ, ಹೈಕೋರ್ಟ್ನ ಮೂರು ಪೀಠಗಳಲ್ಲಿ (ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗ) ಒಟ್ಟು 12 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದ್ದವು’ ಎಂದು ಗೋಪಾಲಸ್ವಾಮಿ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.
‘ಹೈಕೋರ್ಟ್ನ ಮೂರೂ ಪೀಠಗಳಿಗೆ ಮಂಜೂರಾದ ನ್ಯಾಯಮೂರ್ತಿಗಳ ಹುದ್ದೆ ಈಗಿರುವ 50ರಿಂದ 62ಕ್ಕೆ ಏರಿಕೆಯಾಗಲಿದೆ. ಎಚ್.ಎನ್. ನಾಗಮೋಹನ ದಾಸ್ ಅವರು ಈಗಾಗಲೇ ನಿವೃತ್ತರಾಗಿದ್ದಾರೆ. ಬಿ.ವಿ. ಪಿಂಟೋ ಅವರು ಸೇವೆಯಿಂದ ಬಿಡುಗಡೆಯಾಗಿದ್ದಾರೆ. ಏಪ್ರಿಲ್ ಮೊದಲೆರಡು ವಾರಗಳಲ್ಲಿ ಮೂವರು ನ್ಯಾಯಮೂರ್ತಿಗಳು ನಿವೃತ್ತರಾಗಲಿದ್ದಾರೆ’ ಎಂದರು.
ವಕೀಲರ ಪರಿಷತ್ತಿನ ನಿಯೋಗ ಮುಖ್ಯ ನ್ಯಾಯಮೂರ್ತಿಯವರನ್ನು ಸೋಮವಾರ ಭೇಟಿಯಾಗುವ ಸಾಧ್ಯತೆ ಇದೆ. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಕೀಲರಾದ ಪ್ರಮೀಳಾ ನೇಸರ್ಗಿ, ಸುಬ್ಬಾರೆಡ್ಡಿ, ಪಿ.ಎಸ್. ರಾಜಗೋಪಾಲ್, ಕೆ. ಸುಬ್ಬರಾವ್, ಎಂ.ಟಿ. ನಾಣಯ್ಯ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಚ್. ಕಾಂತರಾಜ ಮತ್ತಿತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.