ADVERTISEMENT

ಪಟಾಕಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:41 IST
Last Updated 20 ಅಕ್ಟೋಬರ್ 2017, 19:41 IST
ಪಟಾಕಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ
ಪಟಾಕಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ   

ಬೆಂಗಳೂರು: ಪಟಾಕಿಯಿಂದಾಗಿ ನಗರದ ಹಲವೆಡೆ 40ಕ್ಕೂ ಹೆಚ್ಚು ಜನರು ಶುಕ್ರವಾರ ಗಾಯಗೊಂಡಿದ್ದಾರೆ. ಅವರಲ್ಲಿ 15 ವರ್ಷದೊಳಗಿನ ಗಂಡು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ನಾರಾಯಣ ನೇತ್ರಾಲಯದಲ್ಲಿ 31, ಮಿಂಟೊ ಆಸ್ಪತ್ರೆಯಲ್ಲಿ 3, ನೇತ್ರಧಾಮದಲ್ಲಿ 3, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 3 ಜನರು, ಕಣ್ಣುಗಳಿಗೆ ಹಾನಿ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿವೆ. ರಾಕೆಟ್‌ ಪಟಾಕಿ ಮತ್ತು ಫ್ಲವರ್‌ ಪಾಟ್‌ ಪಟಾಕಿಯಿಂದಲೇ ಹೆಚ್ಚಿನ ಜನರು ಗಾಯ ಮಾಡಿಕೊಂಡಿದ್ದಾರೆ.

ಮೊಮ್ಮಕ್ಕಳು ಸಿಡಿಸಿದ ಪಟಾಕಿಯೊಂದು ಬೊಮ್ಮಸಂದ್ರದ ಚೌಡಮ್ಮ(65) ಅವರಿಗೆ ಬಲಗಣ್ಣಿಗೆ ಹಾನಿ ಮಾಡಿದೆ. ಇವರಿಗೆ ಶುಕ್ರವಾರ ನಾರಾಯಣ ನೇತ್ರಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ‘ಚೌಡಮ್ಮರ ದೃಷ್ಟಿ ಮರಳಿ ಬರುವುದು ಅನುಮಾನ’ ಎಂದು ವೈದ್ಯರು ತಿಳಿಸಿದರು.

ADVERTISEMENT

ಚಾಮರಾಜಪೇಟೆಯ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಸುಧಾಕರ್‌(12), ಕೋರಮಂಗಲದ ತಪನ್‌ ಕುಮಾರ್‌(25) ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ನ ಹುಸೇನ್‌ ಅಹ್ಮದ್‌(25) ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ‘ಲಕ್ಷ್ಮಿ ಪಟಾಕಿ ಹಚ್ಚಿದ ಬಳಿಕ ಒಂದು ನಿಮಿಷ ಕಳೆದರೂ ಅದು ಹೊತ್ತಿಕೊಂಡಿಲ್ಲ. ಅದನ್ನು ಪರೀಕ್ಷಿಸಲು ಹೋಗಿ ಸುಧಾಕರ್‌ ಬಲಗಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾನೆ. ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ’ ಎಂದು ಸುಧಾಕರ್‌ನ ಸಂಬಂಧಿಯೊಬ್ಬರು ತಿಳಿಸಿದರು.

ಕೋಣನಕುಂಟೆಯ ಶ್ರೀಕರ(6) ಪಟಾಕಿ ಸುಡುವಾಗ ಕಣ್ಣು ಸುಟ್ಟುಕೊಂಡಿದ್ದಾನೆ. ಆತನ ಪೋಷಕರು ಜಯನಗರದ ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

ಮಾರತ್‌ಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿಯ 3 ಪ್ರಕರಣಗಳು ದಾಖಲಾಗಿವೆ. ಕಣ್ಣು ಮತ್ತು ಗಲ್ಲದ ಭಾಗಕ್ಕೆ ಸುಟ್ಟ ಗಾಯ ಮಾಡಿಕೊಂಡಿರುವ ಮಕ್ಕಳು ಶುಕ್ರವಾರ ಚಿಕಿತ್ಸೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.