
ಬೆಂಗಳೂರು: ನಗರದಲ್ಲಿ ಬುಧವಾರ ದೀಪಾವಳಿ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಸುಮಾರು 30ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದೆ. ಗಾಯಾಳುಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಸಿಡಿತದಿಂದಾಗಿ ಎರಡು ದಿನಗಳಲ್ಲಿ ಹನ್ನೆರಡು ಮಂದಿ ನೇತ್ರಧಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟಾಕಿ ಸಿಡಿದು ಗಗನ್ಗೌಡ ಎಂಬ ನಾಲ್ಕು ವರ್ಷದ ಮಗುವಿನ ಕಣ್ಣಿಗೆ ಗಂಭೀರ ಗಾಯವಾಗಿದೆ. ಮಂಗಳವಾರ ರಾತ್ರಿ ದಾಖಲಾದ ಕೀರ್ತಿಲಕ್ಷ್ಮೀ (17) ಎಂಬ ಹುಡುಗಿಯ ಕಣ್ಣಿನ ಗುಡ್ಡೆಗೆ ಹಾನಿಯಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.
`ದೀಪಾವಳಿ ಅನಾಹುತದಿಂದ ಈ ವರೆಗೆ 51 ಮಂದಿ ಕಣ್ಣಿಗೆ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಗೇಶ (8), ಶಂಕರ (28), ನಿತಿನ್ (19), ಕಾವ್ಯಶ್ರೀ (9) ಮತ್ತು ಯೋಗಿತಾ (32) ಸೇರಿದಂತೆ ಏಳು ಮಂದಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ~ ಎಂದು ನಾರಾಯಣ ನೇತ್ರಾಲಯದ ವೈದ್ಯರು ಹೇಳಿದರು.
ಮೂರೂವರೆ ವರ್ಷದ ತರುಣ್, ಪ್ರಕಾಶನಗರದ ಶಿವಕುಮಾರ್ (13), ಕವಿತಾ (25), ಸಾತ್ವಿಕ್ (7), ತರುಣ್ (4) ಸೇರಿದಂತೆ ಏಳು ಮಂದಿ ಬುಧವಾರ ಮೋದಿ ಕಣ್ಣಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ಕು ವರ್ಷದ ತರುಣ್ ಹೊರತುಪಡಿಸಿ ಉಳಿದ ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
`ಕಾರ್ತಿಕ್ (17), ಯಶಸ್ವಿನಿ (7), ಶೇಷಗಿರಿ (64), ಹೂವಣ್ಣ (27), ರಮೇಶ್ (37), ಲಕ್ಷ್ಮೀ (39), ಈಶ್ವರ್ (22), ನಾಗರಾಜ್ (35), ಸಾಗರ್ (16), ನರೇಶ್ (25), ನವೀದ್ (14) ಸೇರಿದಂತೆ ಹದಿಮೂರು ಮಂದಿ ಬುಧವಾರ ಚಿಕಿತ್ಸೆ ಪಡೆದರು. ಈ ಪೈಕಿ ಎಂಟು ಮಂದಿ ಮನೆಗೆ ಹಿಂದಿರುಗಿದ್ದಾರೆ~ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.