ADVERTISEMENT

ಪತಿ ಹತ್ಯೆಗೆ ಫೇಸ್‌ಬುಕ್‌ ಸ್ನೇಹಿತನ ಸಹಕಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:39 IST
Last Updated 24 ಫೆಬ್ರುವರಿ 2018, 19:39 IST
ಅನಿತಾ
ಅನಿತಾ   

ಬೆಂಗಳೂರು: ಕುರುಬರಹಳ್ಳಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ನರಸಿಂಹಮೂರ್ತಿ (35) ಅವರನ್ನು ಹತ್ಯೆಗೈದಿದ್ದ ಪತ್ನಿ ಅನಿತಾ (22), ಕೃತ್ಯಕ್ಕೆ ಫೇಸ್‌ಬುಕ್‌ ಸ್ನೇಹಿತನ ಸಹಕಾರ ಪಡೆದಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಫೆ. 22ರಂದು ನಡೆದಿದ್ದ ಕೊಲೆ ಪ್ರಕರಣದ ತನಿಖೆ ನಡೆಸಿದ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು, ಅನಿತಾ, ಆಕೆಯ ಸ್ನೇಹಿತ ರೋಷನ್‌ (24) ಹಾಗೂ ಸಹಚರ ಸೋಮರಾಜು (27) ಅವರನ್ನು ಬಂಧಿಸಿದ್ದಾರೆ.

ಏಳು ವರ್ಷಗಳ ಹಿಂದೆ ಅನಿತಾಳನ್ನು ನರಸಿಂಹಮೂರ್ತಿ ಮದುವೆಯಾಗಿದ್ದರು. ದಂಪತಿಗೆ 5 ವರ್ಷದ ಮಗ ಇದ್ದಾನೆ. ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಕೆಲ ತಿಂಗಳ ಹಿಂದಷ್ಟೇ ನರಸೀ‍ಪುರದ ರೋಷನ್‌, ಫೇಸ್‌ಬುಕ್‌ನಲ್ಲಿ ಅನಿತಾಳನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಅವರಿಬ್ಬರು ಪರಸ್ಪರ ಭೇಟಿಯಾಗುತ್ತಿದ್ದರು. ಸಲುಗೆ ಸಹ ಬೆಳೆದಿತ್ತು.

ADVERTISEMENT

ದಿನವೂ ಜಗಳ ಮಾಡುತ್ತಿದ್ದ ಪತಿಯ ಹತ್ಯೆಗೆ ಸಂಚು ರೂಪಿಸಿದ್ದ ಅನಿತಾ, ರೋಷನ್‌ ಹಾಗೂ ಸೋಮರಾಜುಗೆ ವಿಷಯ ತಿಳಿಸಿದ್ದಳು. ಅವರಿಬ್ಬರು ಮಾರಕಾಸ್ತ್ರ ಸಮೇತ ಮನೆಗೆ ಬಂದು ಹತ್ಯೆ ಮಾಡಿ ಹೋಗಿದ್ದರು. ರಕ್ತಸಿಕ್ತ ದೇಹವನ್ನು ಪ್ಲಾಸ್ಟಿಕ್‌ ಟಾರ್ಪಲ್‌ನಲ್ಲಿ ಸುತ್ತಿ ಬೆಡ್‌ ಕೆಳಗೆ ಇಟ್ಟಿದ್ದರು. ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಹತ್ಯೆ ಮಾಡಿದ್ದಾರೆ ಎಂದು ಪತ್ನಿಯು ನಾಟಕವಾಡಿದ್ದಳು. ನರಸಿಂಹಮೂರ್ತಿ ಅವರ ತಾಯಿ ನೀಡಿದ್ದ ದೂರಿನನ್ವಯ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಪ್ರವೀಣ್‌ ಎಂಬಾತನೇ ತನ್ನ ಪ್ರಿಯಕರ. ಆತನೊಂದಿಗೆ ಸೇರಿ ಕೃತ್ಯ ಎಸಗಿದೆ ಎಂದು ಅನಿತಾ ಹೇಳಿಕೊಂಡಿದ್ದಳು. ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಅಮಾಯಕ ಎಂಬುದು ತಿಳಿಯಿತು. ಆಗ, ಅನಿತಾಳನ್ನೇ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ರೋಷನ್‌ ಹೆಸರು ಬಾಯ್ಬಿಟ್ಟಳು. ಆತನನ್ನು ಉಳಿಸುವುದಕ್ಕಾಗಿ ಪ್ರವೀಣ್‌ ಹೆಸರು ಹೇಳಿದೆ ಎಂದು ತಪ್ಪೊಪ್ಪಿಕೊಂಡಳು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.