ಬೆಂಗಳೂರು: `ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ. ಪಿಂಟೊ ಅವರ ಪೀಠದ ಎದುರು ಮಂಗಳವಾರದಿಂದ ಯಾವುದೇ ವಾದ ಮಂಡಿಸದಿರುವ ನಿರ್ಣಯವನ್ನು ಬೆಂಗಳೂರು ವಕೀಲರ ಸಂಘದ ಸಾಮಾನ್ಯ ಸಭೆ ಕೈಗೊಂಡಿದೆ' ಎಂದು ಸಂಘದ ಅಧ್ಯಕ್ಷೆ ಕೆ.ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ.
`ನ್ಯಾ. ಪಿಂಟೊ ಅವರು ವಕೀಲ ಸಮುದಾಯ ವಿರುದ್ಧ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಸಭೆ ಈ ನಿರ್ಣಯ ಕೈಗೊಂಡಿದೆ' ಎಂದು ಹೇಳಿದ್ದಾರೆ.
ನ್ಯಾ. ಪಿಂಟೋ ಅವರು ಮೈಸೂರಿನಲ್ಲಿ ನೀಡಿದ ಹೇಳಿಕೆ ಕುರಿತು ಚರ್ಚಿಸಲು ಹೈಕೋರ್ಟ್ನಲ್ಲಿ ಸೋಮವಾರ ವಿಶೇಷ ಸಭೆ ನಡೆಸಿದ ಸಂಘ, ಒಟ್ಟು ಐದು ನಿರ್ಣಯಗಳನ್ನು ಕೈಗೊಂಡಿದೆ. ಹೆಚ್ಚುವರಿ ನ್ಯಾಯಮೂರ್ತಿಯಾಗಿರುವ ಪಿಂಟೊ ಅವರನ್ನು ನ್ಯಾಯಮೂರ್ತಿಯಾಗಿ ಕಾಯಂಗೊಳಿಸದಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲು ಹಾಗೂ ಅವರ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಾರದು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರನ್ನು ಕೋರಲು ತೀರ್ಮಾನಿಸಿದೆ.
`ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರನ್ನು ಬೇರೆ ಹೈಕೋರ್ಟ್ಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ನ್ಯಾ. ಸತ್ಯನಾರಾಯಣ ಅವರು ನ್ಯಾಯಾಲಯದಲ್ಲಿ ವಕೀಲರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿದ್ದಾರೆ' ಎಂದು ಸುಬ್ಬಾರೆಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.