ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ರೂಪದರ್ಶಿ ಪೂನಂ ಪಾಂಡೆ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅ.31ರಂದು ವಿಚಾರಣೆಗೆ ಹಾಜರಾಗುವಂತೆ ನಗರದ ಆರನೇ ಎಸಿಎಂಎಂ ನ್ಯಾಯಾಲಯವು ಪೂನಂಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
`2011ರ ವಿಶ್ವಕಪ್ ಕ್ರಿಕೆಟ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡದ ವಿರುದ್ಧ ಜಯಗಳಿಸಿದ್ದ ಸಂದರ್ಭದಲ್ಲಿ ಪೂನಂ ಪಾಂಡೆ ಅವರು ನಗ್ನರಾಗಿ ವಿಷ್ಣು ದೇವರ ಭಾವಚಿತ್ರ ಹಿಡಿದು ಫೋಟೊ ತೆಗೆಸಿಕೊಂಡಿದ್ದರು. ಆ ಫೋಟೊಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.
ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಮತ್ತು ದೇಶದ ಸ್ತ್ರೀ ಸಮುದಾಯಕ್ಕೆ ಅವಮಾನವಾಗಿದೆ' ಎಂದು ಆರೋಪಿಸಿ ವಕೀಲ ಎಸ್.ಉಮೇಶ್ ಎಂಬುವರು ಪೂನಂ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಹಿಂದೆ ಎರಡು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಪೂನಂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕಾಗಿ ನ್ಯಾಯಾಲಯವು ಅ.31ರಂದು ಅವರನ್ನು ವಿಚಾರಣೆಗೆ ಖುದ್ದು ಹಾಜರುಪಡಿಸುವಂತೆ ಸೂಚಿಸಿ ಮುಂಬೈ ನಗರ ಪೊಲೀಸ್ ಕಮಿಷನರ್ಗೆ ಆದೇಶಿಸಿದೆ. ಅದೇ ರೀತಿ ಪೂನಂ ಅವರಿಗೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್ನಲ್ಲಿ ತಿಳಿಸಿದೆ.
ವಧು-ವರರ ಸಮಾವೇಶ
ಲಿಂಗಾಯತ ಕಲ್ಯಾಣ ಟ್ರಸ್ಟ್ ವತಿಯಿಂದ ಜೂನ್ 9ರಂದು ಮಧ್ಯಾಹ್ನ 2ಕ್ಕೆ ವೈದ್ಯರು, ಎಂಜಿನಿಯರ್ಗಳು, ಪದವೀಧರು, ಆನಿವಾಸಿ ಭಾರತೀಯ ವೀರಶೈವ ವಧು-ವರರ ಮುಖಾಮುಖಿ ಸಮಾವೇಶವನ್ನು ಆಯೋಜಿಸಲಾಗಿದೆ.
ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಲಿಂಗಾಯತ ಕಲ್ಯಾಣ ಟ್ರಸ್ಟ್, ನಂ.14, ಜಯದೇವ ವಾಣಿಜ್ಯ ಸಂಕೀರ್ಣ, ಐದನೇ ಮುಖ್ಯರಸ್ತೆ, ಗಾಂಧಿನಗರ. ಹೆಚ್ಚಿನ ಮಾಹಿತಿಗೆ : 2226 9237.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.